ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಚಳವಳಿ ಗಟ್ಟಿ ಧ್ವನಿಯಾಗಿದ್ದ ಚಂಪಾ’

ಕರ್ನಾಟಕ ಸ್ವಾಭಿಮಾನಿ ವೇದಿಕೆಯಿಂದ ನುಡಿನಮನ
Last Updated 15 ಜನವರಿ 2022, 13:22 IST
ಅಕ್ಷರ ಗಾತ್ರ

ಬೆಳಗಾವಿ: ‘ಕನ್ನಡ ಚಳವಳಿಯ ಗಟ್ಟಿ ಧ್ವನಿಯಾಗಿದ್ದ ನೇರ ನುಡಿಯ ಬಂಡಾಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅಗಲಿಕೆಯಿಂದ ಹೋರಾಟದ ಮೂಲ ಕೊಂಡಿ ಕಳಚಿದಂತಾಗಿ ಅನಾಥ ಪ್ರಜ್ಞೆ ಕಾಡುತ್ತಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.

ಕರ್ನಾಟಕ ಸ್ವಾಭಿಮಾನಿ ವೇದಿಕೆ ಜಿಲ್ಲಾ ಘಟಕದಿಂದ ನಗರದ ಕಣಬರ್ಗಿಯ ಸಮತಾ ಶಾಲೆಯಲ್ಲಿ ನಡೆದ ಚಂಪಾ ನುಡಿ-ನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡ ಅಸ್ಮಿತೆಗೆ ಧಕ್ಕೆ ಬಂದಾಗಲೆಲ್ಲ ನಾಡಿನಾದ್ಯಂತ ಹೋರಾಟಗಾರರಿಗೆ ಶಕ್ತಿ ತುಂಬುತ್ತಿದ್ದ ಚಂಪಾ ಅವರ ಸ್ಥಾನವನ್ನು ಸದ್ಯದ ಮಟ್ಟಿಗೆ ಯಾರೂ ತುಂಬಲಾರರು’ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಗೇ ಸಡ್ಡು ಹೊಡೆದು ಸಮಾಜಮುಖಿ ಚಿಂತನೆಯ ಗೋಷ್ಠಿಗಳನ್ನು ಏರ್ಪಡಿಸಿದ್ದು ಅವರ ಸೈದ್ಧಾಂತಿಕ ಬದ್ಧತೆಗೆ ಸಾಕ್ಷಿಯಾಗಿದೆ. ಗೋಕಾಕ ಚಳವಳಿ, ಬಂಡಾಯ ಚಳವಳಿ, ಸಾಲಹಳ್ಳಿ-ಬೆಂಡಿಗೇರಿ ಪ್ರಕರಣಗಳ ಹೋರಾಟದ ಮೂಲಕ ನನ್ನಂತಹ ಸಾವಿರಾರು ಹೋರಾಟಗಾರರನ್ನು ಮುನ್ನಡೆಸಿದ್ದಾರೆ. ಅವರ ಆಶಯದ ಹೋರಾಟಗಳನ್ನು ಮುನ್ನಡೆಸಿಕೊಂಡು ಹೋಗಬೇಕು‘ ಎಂದರು.

ಬಂಡಾಯ ಸಾಹಿತಿ ಡಾ.ಕೆ.ಎನ್. ದೊಡ್ಡಮನಿ ಮಾತನಾಡಿ, ‘ಪಾಟೀಲರು ತಮ್ಮ ಮೊಣಚು, ವ್ಯಂಗ್ಯ ನುಡಿಗಳಿಂದ ವ್ಯವಸ್ಥೆಯನ್ನು ಕುಟುಕುತ್ತಿದ್ದರು. ಸಂಕ್ರಮಣ ಪತ್ರಿಕೆಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ, ತಿದ್ದಿ-ತೀಡಿ ಅರ್ಥಪೂರ್ಣ ಸಾಹಿತ್ಯ ರಚನೆಗೆ ತಾಯಿ ಬೇರಾದವರು. ಬಂಡಾಯದ ಅಂತಹ ತಾಯಿ ಬೇರನ್ನು ಕಳೆದುಕೊಂಡದ್ದು ನಮ್ಮಂಥ ಬರಹಗಾರರಿಗೆ ತುಂಬಲಾಗದ ನಷ್ಟವಾಗಿದೆ’ ಎಂದು ಕಂಬನಿ ಮಿಡಿದರು.

ಕರ್ನಾಟಕ ಸ್ವಾಭಿಮಾನಿ ವೇದಿಕೆಯ ಜಿಲ್ಲಾ ಸಂಚಾಲಕ ಶಂಕರ ಬಾಗೇವಾಡಿ, ‘ಮನುಷ್ಯ ಪ್ರೀತಿಯ ಸೆಲೆಯಂತಿದ್ದ ದಲಿತ-ಬಂಡಾಯ-ರೈತ ಚಳವಳಿಯ ಚಂಪಾ ನೇರ ನುಡಿಗೆ ಹೆಸರಾದವರು. ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಇರಬೇಕೆಂಬ ದಿಟ್ಟ ನಿಲುವು ಹೊಂದಿದ್ದರು. ಕನ್ನಡ ಮಾಧ್ಯಮ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ನಡೆಸಿದ ಎರಡು ಸಾವಿರಕ್ಕಿಂತ ಹೆಚ್ಚಿನ ಶಾಲೆಗಳನ್ನು ಯಾರ ಮುಲಾಜಿಗೂ ಒಳಗಾಗದೆ ಮುಚ್ಚಿಸಿದ್ದು ಇತಿಹಾಸ. ಅಂತಹ ಕನ್ನಡ ಪ್ರಜ್ಞೆಯನ್ನು ನಾವಿಂದು ಬೆಳೆಸಿಕೊಳ್ಳಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ವೀರೇಂದ್ರ ಗೋಬರಿ, ಜಯಶ್ರೀ ನಾಯಕ, ಮಲಿಕಜಾನ ಗದಗಿನ ನುಡಿನಮನ ಸಲ್ಲಿಸಿದರು.

ಶಾಂತಾ ಮೋದಿ, ತೇಜಸ್ವಿನಿ ನಾಯ್ಕರ್, ಪೂಜಾ ಪಾಟೀಲ, ಅರುಣಾ ಪಾಟೀಲ, ಪೂಜಾ ಬಾಗೇವಾಡಿ, ರೇಣುಕಾ ಶಿರೂರ ಇದ್ದರು.

ಪ್ರಾಂಶುಪಾಲೆ ತೇಜಸ್ವಿನಿ ಬಾಗೇವಾಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT