ಬೆಳಗಾವಿ: ‘ಲೋಕಸಭಾ ಚುನಾವಣೆಗೆ ಚಿಕ್ಕೋಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಲವರು ಪ್ರಯತ್ನ ನಡೆಸಿದ್ದಾರೆ. ಟಿಕೆಟ್ ಸಿಕ್ಕರೆ ನನ್ನ ಪುತ್ರ ಅಮಿತ್ ಸ್ಪರ್ಧಿಸಬಹುದು’ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
‘ಈ ಹಿಂದೆಯೇ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಅಮಿತ್ಗೆ ಅವಕಾಶ ಬಂದಿತ್ತು. ಆಗ ಅಸಕ್ತಿ ಇರಲಿಲ್ಲ. ಆದರೆ, ಈಗ ಗೆಳೆಯರು ಸ್ಪರ್ಧಿಸಲು ಒತ್ತಡ ಹೇರಿದ್ದಾರೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಚಿಕ್ಕೋಡಿ ಕ್ಷೇತ್ರದಲ್ಲಿ ನಮ್ಮ ಸಂಪರ್ಕ ಹೆಚ್ಚಿದೆ. ಸಕ್ಕರೆ ಕಾರ್ಖಾನೆಗಳ ಮೂಲಕ ರೈತರ ಒಡನಾಟವಿದೆ. ಹೀಗಾಗಿ ಚಿಕ್ಕೋಡಿಯಿಂದಲೇ ಸ್ಪರ್ಧಿಸುವತ್ತ ಅಮಿತ್ಗೆ ಒಲವು ಇದೆ’ ಎಂದರು.
‘ಸಕ್ರಿಯ ರಾಜಕಾರಣದಿಂದ ದೂರ ಉಳಿಯುತ್ತಿದ್ದೀರಾ’ ಎಂಬ ಪ್ರಶ್ನೆಗೆ ಅವರು, ‘ನಾವೆಲ್ಲ ಮೌಲ್ಯಾಧಾರಿತ ರಾಜಕಾರಣ ಮಾಡಿದವರು. ಈಗ ಆ ರಾಜಕಾರಣ ಇದೆಯೇ’ ಎಂದು ಮರು ಪ್ರಶ್ನಿಸಿದರು.