ಅಥಣಿ: ‘ತಾಲ್ಲೂಕಿನ ಮಹಾಂತೇಶ ನಗರದ ಸರ್ಕಾರಿ ಶಾಲೆಯ ಸಹಶಿಕ್ಷಕಿ ಲಲಿತಾ ಬಿಳ್ಳೂರ ಮಕ್ಕಳಿಂದ ಕೈ–ಕಾಲು ಒತ್ತಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ಶಾಲೆಗೆ ಬೀಗ ಹಾಕಿ ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಅವರನ್ನು ಅಮಾನತಗೊಳಿಸಬೇಕು ಎಂದು ಒತ್ತಾಯಿಸಿದರು.
‘ಶಾಲೆಯಲ್ಲಿ ಹಿಂದೆ 30 ಮಕ್ಕಳಿದ್ದರು. ಈಗ, 18ಕ್ಕೆ ಕುಸಿದಿದೆ. ಮಕ್ಕಳಿಂದ ಕೆಲಸ ಮಾಡಿಸುವುದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವುದಿಲ್ಲ. ಕೊಠಡಿ ಲಾಕ್ ಮಾಡಿಕೊಂಡು ಮಲಗುತ್ತಾರೆ’ ಎಂದು ದೂರಿದರು.
ಸ್ಥಳಕ್ಕೆ ಬಂದ ಸಿಆರ್ಪಿ ಎಂ. ಚನ್ನಗೌಡರ, ಎಸ್. ಮಾಲಗಾವಿ ಸ್ಥಳೀಯರ ಅಹವಾಲು ಆಲಿಸಿದರು. ಹಿರಿಯ ಅಧಿಕಾರಿಗಳ ಅದಿಕಾರಿಗಳ ಗಮನಕ್ಕೆ ತಂದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
‘ಆ ಶಿಕ್ಷಕಿ ವರ್ಗಾಯಿಸುವಂತೆ ಆರು ತಿಂಗಳಿಂದಲೂ ಕೋರುತ್ತಿದ್ದೇವೆ. ಆದರೆ ಶಿಕ್ಷಣ ಇಲಾಖೆಯವರು ಕ್ರಮ ಕೈಗೊಂಡಿಲ್ಲ. ಮಕ್ಕಳೊಂದಿಗೆ ಮಾತ್ರವಲ್ಲದೇ, ನಮ್ಮೊಂದಿಗೂ ಕೆಟ್ಟದಾಗಿ ಮಾತನಾಡಿದ್ದಾರೆ’ ಎಂದು ಎಸ್.ಎಸ್. ಪೂಜಾರಿ ದೂರಿದರು.
‘ಬಹಳ ವರ್ಷದಿಂದ ಇಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಕೆಲವರು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದರಿಂದ ನೋವಾಗಿದೆ’ ಎಂದು ಶಿಕ್ಷಕಿ ಪ್ರತಿಕ್ರಿಯಿಸಿದರು.
‘ಆ ಶಿಕ್ಷಕಿ 13 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಅವರಿಗೆ ಹಾಗೂ ಸ್ಥಳೀಯರಿಗೆ ವೈಮನಸ್ಸು ಮೂಡಿದೆ ಎಂದು ಗೊತ್ತಾಗಿದೆ. ಜನರು ವರ್ಗಾವಣೆಗೆ ಪಟ್ಟು ಹಿಡಿದಿದ್ದಾರೆ. ಎಲ್ಲವನ್ನೂ ಸಮಗ್ರವಾಗಿ ಅವಲೋಕಿಸಲಾಗುವುದು. ಅಗತ್ಯ ಬಿದ್ದರೆ ಅವರನ್ನು ಪಕ್ಕದ ಶಾಲೆಗೆ ನಿಯೋಜಿಸಲು ಕ್ರಮ ವಹಿಸಲಾಗುವುದು’ ಎಂದು ಅಥಣಿ ಬಿಇಒ ಚನ್ನಪ್ಪ ನ್ಯಾಮಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.