ಚಿಕ್ಕೋಡಿ: ‘ಅತಿಕ್ರಮಿಸಿದ ಜಾಗವನ್ನು ತೆರವು ಮಾಡಬೇಕು’ ಎಂದು ಆಗ್ರಹಿಸಿ ತಾಲ್ಲೂಕಿನ ಮಾಂಜರಿ ಗ್ರಾಮದಲ್ಲಿ ಮಂಗಳವಾರ ವಾಣಿಜ್ಯ ಸಂಕೀರ್ಣದಲ್ಲಿ ಶವ ಇಟ್ಟು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ.
ಮಾಂಜರಿ ನಿವಾಸಿ ಪುರಂದರ ಜೋಗೆ (85) ಅನಾರೋಗ್ಯದ ಕಾರಣ ಮಂಗಳವಾರ ನಿಧನರಾದರು. ಇದೇ ಊರಿನ ಸಿಕಂದರ್ ಕಿಲ್ಲೇದಾರ ಎನ್ನುವವರು ಪುರಂದರ ಅವರ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸಿ ಮೂಲ ಮಾಲೀಕರಿಗೆ ನೀಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.
‘ಪುರಂದರ ಅವರು ತಮ್ಮ ಎಂಟೂವರೆ ಗುಂಟೆ ಜಮೀನಿನ ಪೈಕಿ ಮೂರೂವರೆ ಗುಂಟೆ ಮಾತ್ರ ಸಿಕಂದರ ಅವರಿಗೆ ಮಾರಾಟ ಮಾಡಿದ್ದಾರೆ. ಆದರೆ, ಎಲ್ಲ ಜಮೀನನ್ನು ಅತಿಕ್ರಮಣ ಮಾಡಿಕೊಂಡು ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲಾಗಿದೆ. ಈಗ ಜಮೀನು ಮಾಲೀಕ ಮೃತಪಟ್ಟಿದ್ದಾರೆ. ಇನ್ನು ಮುಂದೆಯೂ ಆರೋಪಿ ಜಾಗ ತೆರವು ಮಾಡುವುದಿಲ್ಲ. ಹಾಗಾಗಿ, ತೆರವು ಮಾಡುವವರೆಗೆ ಶವ ಎತ್ತುವುದಿಲ್ಲ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಬಂದ ಚಿಕ್ಕೋಡಿ ತಹಶೀಲ್ದಾರ್ ಚಿದಂಬರ ಕುಲಕರ್ಣಿ, ಡಿವೈಎಸ್ಪಿ ಗೋಪಾಲ ಗೌಡರ, ಅಂಕಲಿ ಪಿಎಸ್ಐ ಕಾಡಪ್ಪ ಜಕ್ಕನ್ನವರ ಅವರು, ಭೂ ಮಾಪನ ಸಿಬ್ಬಂದಿಯಿಂದ ಅಳತೆ ಮಾಡಿಸಿ ಮೃತನ ಕುಟಂಬಕ್ಕೆ ಬರಬೇಕಿದ್ದ 5 ಗುಂಟೆ ಜಮೀನನ್ನು ಮೃತನ ವಾರಸುದಾರರಿಗೆ ಕೊಡಿಸಿದರು.