ಬೆಳಗಾವಿ: ಜಿಲ್ಲೆಯ ಗೋಕಾಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕಾಮಗಾರಿಯೊಂದಕ್ಕೆ ಸಂಬಂಧಿಸಿದಂತೆ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರೊಂದಿಗೆ ಅವಾಚ್ಯ ಪದ ಬಳಸಿ ಮಾತನಾಡಿದ್ದೇ ಅಮಾನತಿಗೆ ಕಾರಣ ಎಂದು ತಿಳಿಸಲಾಗಿದೆ.
ರಾಯಬಾಗದ ಪಟ್ಟಣದಲ್ಲಿ ಅರಣ್ಯ ಭವನ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಅವರು ಡಿಎಫ್ಒ ಶಿವಾನಂದ ನಾಯಕವಾಡಿ ಅವರಿಗೆ ಫೋನ್ ಮಾಡಿದ್ದರು. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದ ಏಕವಚನ ಪ್ರಯೋಗವಾಯಿತು.
‘ನನ್ನನ್ನು ಕೇಳಲು ನೀನ್ಯಾರೋ. ಶಾಸಕನಾಗಿದ್ದರೆ ಏನು ಮಾಡಿಕೊಳ್ಳುತ್ತಿ ಮಾಡಿಕೋ. ನನಗೆ ಏಕವಚನದಲ್ಲಿ ಮಾತನಾಡಿದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ಶಾಸಕನಾಗಿದ್ದರೆ ನಿನ್ನ ಪಾಡಿಗೆ ಇರು ನನ್ನ ಉಸಾಬರಿಗೆ ಬಂದರೆ ಸುಮ್ಮನಿರುವುದಿಲ್ಲ. ಮರಿಯಾದೆ ಕೊಟ್ಟು ಮರಿಯಾದೆ ತೆಗೆದುಕೊ’ ಎಂದೆಲ್ಲ ಅಧಿಕಾರಿ ಮಾತನಾಡಿದ್ದರು. ಇದರ ಆಡಿಯೊ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಅಧಿಕಾರಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಶಾಸಕ ದುರ್ಯೋಧನ ಸಭಾಧ್ಯಕ್ಷರಿಗೆ ದೂರು ನೀಡಿದ್ದರು. ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ಗೋಕಾಕದಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆ ಕೂಡ ನಡೆಸಿದ್ದವು.