ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷಯ ತೃತೀಯ: ಬೆಳಗಾವಿಯಲ್ಲಿ ₹ 100 ಕೋಟಿ ಮೌಲ್ಯದ ಚಿನ್ನಾಭರಣ ಮಾರಾಟ!

Last Updated 3 ಮೇ 2022, 13:57 IST
ಅಕ್ಷರ ಗಾತ್ರ

ಬೆಳಗಾವಿ: ಅಕ್ಷಯ ತೃತೀಯ ಅಂಗವಾಗಿ ನಗರ ಮತ್ತು ತಾಲ್ಲೂಕು ಕೇಂದ್ರ ಮೊದಲಾದ ಸ್ಥಳಗಳಲ್ಲಿ ಚಿನ್ನ, ಬೆಳ್ಳಿ, ವಜ್ರಾಭರಣಗಳು ಮತ್ತು ವಾಹನಗಳ ಖರೀದಿ ಭರಾಟೆ ಮಂಗಳವಾರ ಜೋರಾಗಿತ್ತು.

‘ಈ ಶುಭ ದಿನದಂದು ಬಂಗಾರ ಖರೀದಿಸಿದರೆ ವರ್ಷವಿಡೀ ಒಳಿತಾಗುತ್ತದೆ; ಸಂಪತ್ತು ಅಕ್ಷಯವಾಗುತ್ತದೆ’ ಎಂಬ ನಂಬಿಕೆ ಜನರಲ್ಲಿ ಇರುವುದರಿಂದಾಗಿ ಚಿನ್ನಾಭರಣಗಳಿಗೆ ಬಹಳ ಬೇಡಿಕೆ ಕಂಡುಬಂತು ಎಂದು ಚಿನ್ನಾಭರಣ ಅಂಗಡಿಗಳವರು ತಿಳಿಸಿದರು. ಚಿನ್ನಾಭರಣ ಮಳಿಗೆಗಳು ಬೆಳಿಗ್ಗೆಯಿಂದ ರಾತ್ರಿವರೆಗೂ ಗ್ರಾಹಕರಿಂದ ತುಂಬಿದ್ದವು.

ಕೋವಿಡ್–19 ಸಂಕ್ರಾಮಿಕ ಕಾರಣದಿಂದ ಕಳೆದೆರಡು ವರ್ಷ ‘ಅಕ್ಷಯ ತೃತೀಯ’ ಸಂದರ್ಭದಲ್ಲಿ ಗ್ರಾಹಕರಿಂದ ಹೆಚ್ಚಿನ ಚಿನ್ನಾಭರಣ ಖರೀದಿ ನಡೆದಿರಲಿಲ್ಲ. ಈ ಬಾರಿ ಕೋವಿಡ್ ಕಾರ್ಮೋಡ ಸರಿದಿದ್ದರಿಂದ ಹಾಗೂ ಮದುವೆಯ ಸೀಜನ್‌ ಕೂಡ ಆಗಿರುವುದರಿಂದ ಹೆಚ್ಚಿನ ಬೇಡಿಕೆ ಕಂಡುಬಂತು ಎಂದು ವರ್ತಕರು ವಿಶ್ಲೇಷಿಸಿದರು.

‘ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಒಂದು ವಾರದಿಂದಲೂ ಉತ್ತಮ ವಹಿವಾಟು ನಡೆದಿದೆ. ಮಂಗಳವಾರ ನಮ್ಮ ನಿರೀಕ್ಷೆಗೂ ಮೀರಿ ಗ್ರಾಹಕರು ಬಂದರು. ನಮ್ಮ ಅಂಗಡಿಯಲ್ಲಿ ಗ್ರಾಹಕರು ಅಕ್ಷರಶಃ ಮುಗಿಬಿದ್ದರು. ನಗರದಾದ್ಯಂತ ₹ 100 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿರುವ ಅಂದಾಜಿದೆ’ ಎಂದು ಖಡೇಬಜಾರ್‌ನ ಪೋತದಾರ್‌ ಬ್ರದರ್ಸ್‌ ಜ್ಯುವೆಲ್ಲರ್ಸ್‌ನ ಪಾಲುದಾರ ಹಾಗೂ ಚಿನ್ನಾಭರಣ ವರ್ತಕ ಅನಿಲ್ ‍‍ಪೋತದಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸೋಮವಾರ 10 ಗ್ರಾಂ. ಚಿನಕ್ಕೆ ₹55ಸಾವಿರ ಇತ್ತು. ಇದು ಮಂಗಳವಾರ ₹ 53ಸಾವಿರ ಇಳಿಕೆಯಾಗಿತ್ತು. ಇದನ್ನು ಬಹಳಷ್ಟು ಗ್ರಾಹಕರು ಸದ್ಬಳಕೆ ಮಾಡಿಕೊಂಡರು’ ಎಂದು ಮಾಹಿತಿ ನೀಡಿದರು.

ನಗರದ ಖಡೇಬಜಾರ್‌, ಸಮಾದೇವಿ ಗಲ್ಲಿ, ತಿಲಕವಾಡಿ, ಶಹಾಪುರ ಪ್ರದೇಶದಲ್ಲಿ ಅತಿಹೆಚ್ಚಿನ ಚಿನ್ನಾಭರಣ ಅಂಗಡಿಗಳಿವೆ. ಇದಲ್ಲದೆ, ತನಿಷ್ಕ್‌, ಮಲಬಾರ್, ಜೋಯಾಲುಕ್ಕಾಸ್‌, ಪಿ.ಎನ್‌. ಗಾಡ್ಗೀಳ್‌, ಕಲ್ಯಾಣ್‌ ಮೊದಲಾದ ದೊಡ್ಡ ಮಳಿಗೆಗಳಲ್ಲೂ ಗ್ರಾಹಕರು ತುಂಬಿದ್ದರು. ಅಂಗಡಿಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ವಹಿವಾಟು ನಡೆಯಿತು. ಈ ಮುಂಚೆಯೇ ವಿನ್ಯಾಸ ಅಂತಿಮಗೊಳಿಸಿ, ಮುಂಗಡ ಹಣ ನೀಡಿ ಹೋಗಿದ್ದ ಅನೇಕರು ಸಂಪೂರ್ಣ ಹಣ ಪಾವತಿಸಿ ಆಭರಣಗಳನ್ನು ಖರೀದಿಸಿದರು. ಕೆಲವರು, ಸಿದ್ಧ ಆಭರಣಗಳನ್ನು ಸ್ಥಳದಲ್ಲೇ ಖರೀದಿಸಿದರು ಎಂದು ವರ್ತಕರು ತಿಳಿಸಿದರು.

ನಗರವೊಂದರಲ್ಲೇ 250ಕ್ಕೂ ಹೆಚ್ಚು ಚಿನ್ನಾಭರಣ ಅಂಗಡಿಗಳಿವೆ. ಇಲ್ಲಿಗೆ ಜಿಲ್ಲೆಯವರ ಜೊತೆ ಸಮೀಪದಲ್ಲಿರುವ ಮಹಾರಾಷ್ಟ್ರದಿಂದಲೂ ಗ್ರಾಹಕರು ಬಂದಿದ್ದರು.

‘ಎಲ್ಲ ರೀತಿಯ ಆಭರಣಗಳಿಗೂ ಬೇಡಿಕೆ ಇತ್ತು. ಚಿನ್ನ ಖರೀದಿಸಲು ಸಾಧ್ಯವಾಗದವರು ಬೆಳ್ಳಿ ಆಭರಣಗಳನ್ನು ತೆಗೆದುಕೊಂಡರು. ಚಿನ್ನದುಂಗುರ, ನೆಕ್ಲೇಸ್, ಸರಗಳು, ಮೂಗುತಿ, ಓಲೆ, ಬಳೆ ಮೊದಲಾದವುಗಳಿಗೆ ಬೇಡಿಕೆ ಕಂಡುಬಂತು’ ಎಂದು ವರ್ತಕರೊಬ್ಬರು ಪ್ರತಿಕ್ರಿಯಿಸಿದರು.

ಹೊಸ ದ್ವಿಚಕ್ರವಾಹನ, ಕಾರ್ ಮೊದಲಾದ ವಾಹನಗಳ ಖರೀದಿಯೂ ದೊಡ್ಡ ಪ್ರಮಾಣದಲ್ಲಿತ್ತು. ದೇವಾಲಯಗಳಲ್ಲಿ ಹೊಸ ವಾಹನಗಳಿಗೆ ಪೂಜೆ ಸಲ್ಲಿಸುತ್ತಿದ್ದುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT