ಅಥಣಿ: ಇದುವರೆಗೆ ಪಕ್ಷದ ಟಿಕೆಟ್ ಘೋಷಣೆ ಮಾಡದಿದ್ದರಿಂದ ಬೇಸರಗೊಂಡ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಶನಿವಾರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.
ಇಲ್ಲಿನ ಸಿದ್ದೇಶ್ವರ ದೇವಸ್ಥಾನದಿಂದ ತಮ್ಮ ಬೆಂಬಲಿಗರ ಜೊತೆ ಬೈಕ್ ರ್ಯಾಲಿ ನಡೆಸಿದ ಅವರು, ತಹಶೀಲ್ದಾರ್ ಕಚೇರಿವರೆಗೆ ತೆರಳಿ ನಾಮಪತ್ರ ಸಲ್ಲಿಸಿದರು.
‘ಈಗಲೂ ನಾನು ಕಾಂಗ್ರೆಸ್ನಲ್ಲಿಯೇ ಇದ್ದೇನೆ. ಪಕ್ಷ ತೊರೆದಿಲ್ಲ. ಸೋಮವಾರದವರೆಗೂ ಕಾಲಾವಕಾಶವಿದೆ. ಟಿಕೆಟ್ ಸಿಗದಿದ್ದರೆ ಪಕ್ಷೇತರರಾಗಿ ಚುನಾವಣೆ ಎದುರಿಸುತ್ತೇನೆ’ ಎಂದರು.
ಒಟ್ಟು 4 ನಾಮಪತ್ರ ಸಲ್ಲಿಕೆ:
ಅಥಣಿ ಕ್ಷೇತ್ರದಿಂದ 3, ಕಾಗವಾಡ ಕ್ಷೇತ್ರದಿಂದ 1 ಸೇರಿದಂತೆ ಒಟ್ಟು 4 ನಾಮಪತ್ರಗಳು ಶನಿವಾರ ಸಲ್ಲಿಕೆಯಾಗಿವೆ.
ಅಥಣಿಯಿಂದ ನ್ಯಾಷನಲ್ ವುಮೆನ್ಸ್ ಪಕ್ಷದಿಂದ ದಾವುಲ್ಸಾಬ್, ಪಕ್ಷೇತರರಾಗಿ ಶಹಜಹಾನ್ ಡೊಂಗರಗಾಂವ ಹಾಗೂ ಬಾಬುಬಲಿ ಅಜ್ಜಪ್ಪಗೊಳ ನಾಮಪತ್ರ ಸಲ್ಲಿಸಿದರು. ಕಾಗವಾಡದಿಂದ ಉತ್ತಮ ಪ್ರಜಾಕೀಯ ಪಕ್ಷದಿಂದ ಸಚಿನ್ ಅಲಗೂರೆ ನಾಮಪತ್ರ ಸಲ್ಲಿಸಿದರು.