ಅಥಣಿ: ‘ಮಹಿಳೆಯರ ಮುಂದೆ ಸಾಕಷ್ಟು ಸವಾಲುಗಳಿವೆ. ಅವುಗಳಿಗೆ ನಾವೇ ಉತ್ತರ ನೀಡಬೇಕಾಗಿದೆ. ಇದಕ್ಕೆ ಆತ್ಮಬಲ ಅತ್ಯಗತ್ಯವಾಗಿದೆ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಹೇಳಿದರು.
ಇಲ್ಲಿನ ಮೋಟಗಿ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ಉತ್ಸವದ ನಡೆದ ಮುಕ್ತಾಯಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಆಧುನಿಕತೆ ಬೆಳೆಯುತಿದ್ದಂತೆಯೇ ಶ್ರೀಮಂತಿಕೆ, ವೈಭವೀಕರಣದ ಬೆನ್ನು ಹತ್ತಿದ ವಿದ್ಯಾವಂತರು ಜೀವನವನ್ನು ಕೇವಲ ಹಣದಿಂದ ಅಳೆಯುತ್ತಿದ್ದೇವೆ. ಮಾನವೀಯ ಮೌಲ್ಯಗಳನ್ನು ಕಡೆಗಣಿಸುತ್ತಿದ್ದೇವೆ. ಇದು ಬದುಕಿನ ಸರಿಯಾದ ಕ್ರಮವಲ್ಲ’ ಎಂದರು.
‘ಬೆಳಗಾವಿ ಅಷ್ಟೇ ಅಲ್ಲ, ಕರ್ನಾಟಕದ ಯಾವುದೇ ಪ್ರದೇಶದ ಒಂದಿಂಚನ್ನೂ ಮಹಾರಾಷ್ಟ್ರದವರು ಪಡೆಯುವುದಕ್ಕೆ ಆಗುವುದಿಲ್ಲ. ಕನ್ನಡಿಗರು ಯಾವಾಗಲೂ ಒಗ್ಗಟ್ಟನ್ನು ಬಿಟ್ಟವರಲ್ಲ’ ಎಂದು ಹೇಳಿದರು.
ಮೋಟಗಿ ಮಠದ ಅಧ್ಯಕ್ಷ ಪ್ರಭುಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಈ ಮಹಿಳೆಯರಿಗೆ ಮುಕ್ತಾಯಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಸವ ಕಲ್ಯಾಣದ ಬಸವ ತತ್ವ ಪ್ರಸಾರಕಿ ಅಕ್ಕ ಗಂಗಾಬಿಕಾ, ಸುಮಿತ್ರಾ ಕುಮಠಳ್ಳಿ, ಸಿ.ಸಿ. ಹೇಮಲತಾ, ವಿದ್ಯಾ ಭಜಂತ್ರಿ, ಕೃತಿಕಾ ಜಂಗಿಮಠ ಇದ್ದರು.