ಬೆಳಗಾವಿ: ಹಮಾರಾ ದೇಶ ಸಂಘಟನೆಯಿಂದ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ಕೌಶಲ ಶಿಬಿರದ ಮುಕ್ತಾಯ ಸಮಾರಂಭ ಭಾನುವಾರ ಇಲ್ಲಿನ ಟಿಳಕವಾಡಿ ಪ್ರೌಢಶಾಲೆ ಸಭಾಂಗಣದಲ್ಲಿ ನಡೆಯಿತು.
ಹೋದ ವರ್ಷದ ಆಗಸ್ಟ್ನಲ್ಲಿ ನಡೆದ ಭಾಷಣ ಸ್ಪರ್ಧೆಯ ಮುಂದುವರಿದ ಭಾಗವಾಗಿ ಜ. 12 ಮತ್ತು 19ರಂದು ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾದ ಕಿಶೋರ ಕಾಕಡೆ ಹಾಗೂ ಮೇಧಾ ಮರಾಠೆ ಮಾರ್ಗದರ್ಶನ ನೀಡಿದರು. ಭಾಷಣ ಕಲೆಯ ಮಹತ್ವ, ಹಾವಭಾವ, ವಸ್ತು ವಿಶ್ಲೇಷಣೆ ಮೊದಲಾದ ವಿಷಯಗಳನ್ನು ತಿಳಿಸಿಕೊಟ್ಟರು. ಪರಿಣಾಮಕಾರಿಯಾಗಿ ಭಾಷಣ ಮಂಡಿಸುವ ಕಲೆ ರೂಢಿಸಿಕೊಳ್ಳಲು ಬೇಕಾದ ಸಂಗತಿಗಳನ್ನು ತಿಳಿಸಿದರು.
ವಿವಿಧ ಶಾಲೆಗಳ 30 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅವರಿಗೆ ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ಜ್ಯೋತಿ ಸೆಂಟ್ರಲ್ ಶಾಲೆಯ ಪ್ರಾಂಶುಪಾಲರಾದ ಸೋನಲ್ ಸೌದಾಗರ ಪ್ರಭು ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು.