ಬೆಳಗಾವಿ: ‘ಕೋವಿಡ್-19 ನಂತರದ ಜಗತ್ತಿನಲ್ಲಿ ಸಂವಹನ ಕೌಶಲಕ್ಕೆ ತಂತ್ರಜ್ಞಾನ ಸಾಕ್ಷರತೆಯು ಅತ್ಯವಶ್ಯವಾಗಿದೆ’ ಎಂದುಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಸುಮಿತಾ ರಾಯ್ ಹೇಳಿದರು.
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ‘ಎಫೆಕ್ಟಿವ್ ಕಮ್ಯುನಿಕೇಷನ್ ಸ್ಕಿಲ್ ಇನ್ ದ ಡಿಜಿಟಲ್ ಎರಾ’ ಎಂಬ ವಿಷಯ ಕುರಿತು ಈಚೆಗೆ ಆಯೋಜಿಸಿದ್ದ ಆನ್ಲೈನ್ ಅಂತರರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
‘ಕೊರೊನಾ ಸೃಷ್ಟಿಸಿರುವ ಪರಿಸ್ಥಿತಿಗೆ ಹೊಂದಿಕೊಳ್ಳುವ ಮೂಲಕ ನಾವು ಸುಧಾರಣೆ ಕಾಣಬೇಕು. ಇದಕ್ಕಾಗಿ ತಂತ್ರಜ್ಞಾನ ಬಳಸಿಕೊಳ್ಳಬೇಕಾಗಿದೆ’ ಎಂದರು.
ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಉದ್ಘಾಟಿಸಿದರು. ವಿಭಾಗ ಮುಖ್ಯಸ್ಥ ಪ್ರೊ.ವಿ.ಎಫ್. ನಾಗಣ್ಣವರ ಮಾತನಾಡಿದರು.
ಮೊದಲ ಗೋಷ್ಠಿಯಲ್ಲಿ ಡಾ.ಅಜಯ ಚೊಬೆ ಅವರು ‘ಭಾಷಾ ಪರಿಣತಿ ಮತ್ತು ಪ್ರಬಂದ ಮಂಡನಾ ಕೌಶಲ’, 2ನೇ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಜೋಧಪುರದ ಜೈ ನಾರಾಯಣ ವ್ಯಾಸ ವಿಶ್ವವಿದ್ಯಾಲಯದ ಡಾ.ವಿಭಾ ಭೂತ ‘ವರ್ಚಸ್ಸು ನಿಯಮಗಳು: ಸಂಭಾಷಣೆಯ ಮಹತ್ವ’ ವಿಷಯ ಕುರಿತು ಮಾತನಾಡಿದರು.
3ನೇ ಗೋಷ್ಠಿಯಲ್ಲಿ ಅಮೆರಿಕದ ಪ್ರೊ.ನೀಲಾ ಭಟ್ಟಾಚಾರ್ಯ ಅವರು ‘ಸಂವಹನವು ಸಮ್ಮಿಲನ: ತಂತ್ರಜ್ಞಾನ ಯುಗದಲ್ಲಿ ಅನುಕರಣೆಯ ಅನಾವರಣ’ ವಿಷಯದ ಬಗ್ಗೆ ವಿಷಯ ಮಂಡಿಸಿದರು.