ಬೆಳಗಾವಿ: ಕೋವಿಡ್–19 ಲಾಕ್ಡೌನ್ ಹಿನ್ನೆಲೆಯಲ್ಲಿ, ಇಲ್ಲಿನ ರೈಲು ನಿಲ್ದಾಣ ಸಮೀಪದ ಮೇಲ್ಸೇತುವೆಯಲ್ಲಿ ಸಂಚರಿಸದಂತೆ ಬ್ಯಾರಿಕೇಡ್ ಹಾಕಿದ್ದ ಪೊಲೀಸರ ವಿರುದ್ಧ ಮಂಗಳವಾರ ಜನಾಕ್ರೋಶ ವ್ಯಕ್ತವಾಯಿತು.
ರೋಗಿಯೊಬ್ಬರಿಗೆ ತುರ್ತು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲು ಬಂದ ಆಂಬುಲೆನ್ಸ್ ಆ ರಸ್ತೆಯಲ್ಲಿ ಸಂಚರಿಸಲು ಅವಕಾಶ ಆಗಲಿಲ್ಲ. ಸುತ್ತಿ ಬಳಸಿ ಬೇರೊಂದು ರಸ್ತೆಯಲ್ಲಿ ಆಸ್ಪತ್ರೆ ತಲುಪಿತ್ತು. ಈ ವಿಡಿಯೊ ಇಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವೈರಲ್ ಆಗಿತ್ತು. ಅವೈಜ್ಞಾನಿಕವಾಗಿ ಸಂಚಾರ ನಿರ್ಬಂಧಿಸಿದ್ದಕ್ಕೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನು ಗಮನಿಸಿದ ಪೊಲೀಸರು ಸಂಜೆ ಬ್ಯಾರಿಕೇಡ್ ತೆರವುಗೊಳಿಸಿ ರಸ್ತೆಯ ಒಂದು ಭಾಗದಲ್ಲಿ ತುರ್ತು ಸಂದರ್ಭದಲ್ಲಿ ಸಂಚರಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದರಿಂದ ಆಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ಇತರ ತುರ್ತು ವಾಹನಗಳು ಶಹಾಪುರ, ಅನಗೋಳ, ಕ್ಯಾಂಪ್ ಪ್ರದೇಶಕ್ಕೆ ತೆರಳುವುದಕ್ಕೆ ಅನುಕೂಲವಾಗಿದೆ.