ಶಿವನ ನಾಮಸ್ಮರಣೆಯ ಶ್ರೇಷ್ಠತೆಯನ್ನು ಇಲ್ಲಿ ಕಾಣಬಹುದು. ಶಿವನ ಸ್ಮರಣೆಯು ವೇದ, ಶಾಸ್ತ್ರ, ತರ್ಕಗಳಿಗೆ ಮೀರಿದುದಾಗಿದೆ. ವೇದವು ಶಬ್ದ ಪ್ರಮಾಣವಾಗಿದ್ದು, ಎಲ್ಲಕ್ಕಿಂತ ಮೂಲ ಎನ್ನುತ್ತಾರೆ. ಅದಕ್ಕಿಂತಲೂ ಮೂಲವಾದುದು ನಿರಾಕಾರ ಸೃಷ್ಟಿಕರ್ತ ಪರಮಾತ್ಮನಾಗಿದ್ದಾನೆ. ಶಾಸ್ತ್ರವು ವೈಚಾರಿಕವಾದುದು; ಪ್ರತಿಯೊಂದರ ಕುರಿತು ವಿವರವಾಗಿ ಚಿಂತನೆ ಮಾಡುತ್ತದೆ. ಇಂತಹ ಶಾಸ್ತ್ರಕ್ಕೂ ಪರಶಿವನ ಶಕ್ತಿಯ ಕುರಿತಾದ ಅರಿವು ಸಾಧ್ಯವಾಗಿಲ್ಲ. ತರ್ಕವು ಬೌದ್ಧಿಕವಾದುದು. ಪ್ರತಿಯೊಂದರ ಕುರಿತಾಗಿ ಆಮೂಲಾಗ್ರವಾಗಿ ಆಲೋಚನೆ ಮಾಡುತ್ತದೆ. ಅಂತಹ ತರ್ಕಕ್ಕೂ ನಿಲುಕಲಾರದುದು ಶಿವನ ಸ್ಮರಣೆ. ಮನುಷ್ಯನ ಸಾಧನಾ ಸಿದ್ಧಿಗಳು ಮಂತ್ರ-ತಂತ್ರಗಳನ್ನು ಅವಲಂಬಿಸಿವೆ. ಇಂತಹ ಮಂತ್ರ-ತಂತ್ರಗಳಿಗೂ ಶಿವನ ನೆಲೆ ತಿಳಿಸಿಕೊಡಲು ಸಾಧ್ಯವಾಗುತ್ತಿಲ್ಲ. ಶಿವನ ನೆಲೆ ಅರಿಯಲು ಈ ಲೋಕ ಪರದಾಡುತ್ತಿದೆ. ಆತ ಅಸ್ಪೃಶ್ಯನಾದ ಶ್ವಪಚಯ್ಯನಿಗೆ ಒಲಿದಿದ್ದಾನೆ. ಶ್ವಪಚಯ್ಯನಿಗೆ ಒಲಿಯಲು ಶಿವನ ಸ್ಮರಣೆಯನ್ನು ಸದಾ ಕಾಲ ಕಾಯಾ–ವಾಚಾ–ಮನಸಾ ಮಾಡಿದುದು ಕಾರಣವಾಗಿದೆ. ಶಿವನ ಸ್ಮರಣೆಗೆ ಜಾತಿ ಭೇದಗಳು ಅಡ್ಡಿಯಾಗವು ಎನ್ನುವುದು ಈ ಮೇಲಿನ ವಚನದ ತಾತ್ಪರ್ಯವಾಗಿದೆ.