ಬೆಳಗಾವಿ: ‘ವೀರ ಸಾವರ್ಕರ್ ಅವರನ್ನು ಮಹಾಕಾವ್ಯ ಬರೆಯದ ಮಹಾಕವಿ ಎಂದು ಕರೆದಿದ್ದಾರೆ. ಏಕೆಂದರೆ, ಅವರ ಜೀವನವೇ ಮಹಾಕಾವ್ಯವಾಗಿತ್ತು. ಬರೆದಂತೆ ಬದುಕಿದವರು. ರಾಷ್ಟ್ರೀಯತ್ವ ಅವರ ಕವಿತೆಗಳ ವಸ್ತುವಾಗಿದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ವಿಭಾಗದ ಮುಖ್ಯಸ್ಥ ಡಾ.ವಿನೋದ ಗಾಯಕವಾಡ ಹೇಳಿದರು.
ನಗರದ ಶಹಾಪುರದ ಸರಸ್ವತಿ ವಾಚನಾಲಯದಿಂದ ಕೋರೆಗಲ್ಲಿಯ ಸರಸ್ವತಿ ವಾಚನಾಲಯದಲ್ಲಿ ಆಯೋಜಿಸಿದ್ದ ‘ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ಸ್ಮೃತಿ ವ್ಯಾಖ್ಯಾಮಾಲಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
‘ದೀನ–ದಲಿತರು, ಬಡವರು ಹೀಗೆ... ಎಲ್ಲರ ಉದ್ದಾರವೇ ಅವರ ಕವಿತೆಗಳ ಸಾರವಾಗಿದೆ’ ಎಂದರು.
‘ಅಂಡಮಾನಿನ ಜೈಲಿನಲ್ಲಿದ್ದ ದೀರ್ಘಕಾಲದಲ್ಲಿ, ಅವರಿಗೆ ಪೆನ್ ಹಾಗೂ ಕಾಗದ ಕೊಡುವುದನ್ನು ನಿಷೇಧಿಸಲಾಗಿತ್ತು. ಸಾವರ್ಕರ್ ತಮ್ಮ ಗೀತೆಗಳನ್ನು ಜೈಲಿನ ಗೋಡೆಗಳ ಮೇಲೆ ಮುಳ್ಳಿನಿಂದ, ಕಲ್ಲಿನ ತುಂಡುಗಳಿಂದ ಕೊರೆದರು. ಆ ಜೈಲಿನಲ್ಲಿ ಭಾರತೀಯ ಕೈದಿಗಳ ಪಾಡನ್ನು ಪ್ರತಿಬಿಂಬಿಸುವ ‘ಕಾಳಾ ಪಾಣಿ’ (ಅಂಡಮಾನಿನ ಕಾರಾಗೃಹದ ಕರಿನೀರಿನ ಶಿಕ್ಷೆ) ಎನ್ನುವುದು ಅವರ ಗಮನಾರ್ಹ ಕೃತಿಯಾಗಿದೆ. ಮರಾಠಿ ಗೀತೆಗಳನ್ನು ಅವರು ಬರೆದರು. ಅವು ಜನಪ್ರಿಯವಾಗಿದ್ದು, ಇಂದಿಗೂ ಮಹಾರಾಷ್ಟ್ರದಲ್ಲಿ ಕೇಳಸಿಗುತ್ತವೆ’ ಎಂದು ತಿಳಿಸಿದರು.