ತೆಲಸಂಗ: ‘ಸಹಕಾರ ಸಚಿವರಾಗಿದ್ದಾಗ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿ ಸೇವೆ ಸಲ್ಲಿಸಿದ ಲಕ್ಷ್ಮಣ ಸವದಿ ಅವರು ರೈತರಿಗೆ ಆರ್ಥಿಕ ಶಕ್ತಿ ತುಂಬಿದ್ದಾರೆ. ಸಹಕಾರಿ ರಂಗದ ಭೀಷ್ಮ ಎನಿಸಿದ್ದಾರೆ’ ಎಂದು ಬಿಜೆಪಿ ಮುಖಂಡ ಚಿದಾನಂದ ಸವದಿ ಹೇಳಿದರು.
ಸಮೀಪದ ಬನ್ನೂರ ಗ್ರಾಮದ ಪಿಕೆಪಿಎಸ್ ವತಿಯಿಂದ ನೂತನ ಗೋದಾಮು ಕಡ್ಡಡ ನಿರ್ಮಾಣಕ್ಕೆ ಶುಕ್ರವಾರ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರೈತನ ಮಗನೊಬ್ಬ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಬೆಳೆದಿರುವುದಕ್ಕೆ ಅಥಣಿ ಕ್ಷೇತ್ರದ ಜನರ ಆಶೀರ್ವಾದವೇ ಕಾರಣ. ನಿರ್ಲಕ್ಷಕ್ಕೆ ಒಳಗಾಗಿದ್ದ ಸಹಕಾರಿ ಕ್ಷೇತ್ರಕ್ಕೆ ಶಕ್ತಿ ತುಂಬಿದರು. ಗ್ರಾಮ ಗ್ರಾಮಗಳಲ್ಲಿ ಸಹಕಾರಿ ಸಂಘ ತೆರೆದರು. ಇದರಿಂದ ಸಂಕಷ್ಟದಲ್ಲಿದ್ದ ರೈತನಿಗೆ ಸ್ವಾವಲಂಬಿ ಜೀವನ ನಡೆಸಲು ಸಹಾಯವಾಯಿತು’ ಎಂದರು.
‘ಕೃಷಿಕರು ಸಹಕಾರಿ ಸಂಘಗಳಲ್ಲಿ ದೊರೆಯುವ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕನ್ನಾಳದ ಬಸಲಿಂಗಯ್ಯ ಹಿರೇಮಠ ಸ್ವಾಮೀಜಿ, ಮುಖಂಡರಾದ ಗುರು ದಾಶ್ಯಾಳ, ಗುರು ಮುಗ್ಗನವರ, ನಾನಾಗೌಡ ಪಾಟೀಲ, ಗುರು ಕಾಮನ್, ಸಿದ್ರಾಮ ಬಿಳ್ಳೂರ, ಅಮೋಘ ಖೊಬ್ರಿ, ಮಾಯಪ್ಪ ಶಾಡ್ಯಾಳ ಇದ್ದರು.