ಹೊಸಪೇಟೆ: ಬಹಿರಂಗ ಚರ್ಚೆಗೆ ಒಳಪಡಿಸದೆ ಸದಾಶಿವ ಆಯೋಗದ ವರದಿ ಜಾರಿಗೆ ತರದಂತೆ ಆಗ್ರಹಿಸಿ ಬಂಜಾರ ಸಮಾಜ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ, ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ನಗರದ ರಾಣಿಪೇಟೆಯಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮನೆ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ಸಚಿವರ ಆಪ್ತ ಸಹಾಯಕ ಗೋವಿಂದ ಕುಲಕರ್ಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ಅಸ್ಪೃಶ್ಯ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಹುಸಿ ವಾದವನ್ನು ಮುಂದಿಟ್ಟು ಪರಿಶಿಷ್ಟ ಜಾತಿಗಳ ಒಗ್ಗಟ್ಟು ಮುರಿಯಲು ಕೆಲವರು ಹುನ್ನಾರ ನಡೆಸಿದ್ದಾರೆ. ಇದು ಒಡೆದಾಳುವ ನೀತಿ ಬಿಟ್ಟರೆ ಬೇರೇನೂ ಇಲ್ಲ’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
‘ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಕೊರಮ, ಕೊರಚ, ಭೋವಿ ಸಮುದಾಯಗಳನ್ನು ಕೈಬಿಡಬೇಕೆಂಬ ವಾದದಲ್ಲಿ ಎಳ್ಳಷ್ಟೂ ಹುರುಳಿಲ್ಲ. ಆಯೋಗದ ವರದಿ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯಲಿ. ಆಗ ಜನಸಾಮಾನ್ಯರಿಗೆ ಅದರ ಬಗ್ಗೆ ತಿಳಿಯುತ್ತದೆ. ಹಾಗೇ ಮಾಡದೆ ನೇರವಾಗಿ ವರದಿ ಜಾರಿಗೆ ತರುವುದು ಸರಿಯಲ್ಲ. ಒಂದುವೇಳೆ ತಂದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಮುಖಂಡರಾದ ತೇಜಸ್ವಿ ನಾಯ್ಕ, ಕೃಷ್ಣಾ ನಾಯ್ಕ, ಮುರಳೀಧರ್ ನಾಯ್ಕ, ಡಿ. ಸುಮಾಬಾಯಿ, ಸಂತೋಷ್ ನಾಯ್ಕ, ಗೋವಿಂದ ನಾಯ್ಕ, ಡಾಕ್ಯಾ ನಾಯ್ಕ, ವೆಂಕಟೇಶ್ ನಾಯ್ಕ, ಎಲ್. ರಮೇಶ್ ಇದ್ದರು.