ಬಳ್ಳಾರಿ: ಜಿಲ್ಲೆಯ ಎಲ್ಲ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ಜುಲೈ 12ರಿಂದ 14ರವರೆಗೆ ಬಳ್ಳಾರಿ ಸಾಂಸ್ಕೃತಿಕ ಉತ್ಸವ ವನ್ನು ಆಯೋಜಿಸಲಾಗುವುದು. ಇದು ಜಿಲ್ಲೆಯಲ್ಲಿ ಮೊಟ್ಟಮೊದಲ ಪ್ರಯತ್ನ ಎಂದು ಉತ್ಸವ ನಿರ್ವಹಣಾ ಸಮಿತಿಯ ಪ್ರಮುಖರಾದ ಜಯಪ್ರಕಾಶ ಗುಪ್ತಾ ತಿಳಿಸಿದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಉತ್ಸವದಲ್ಲಿ ಚಿತ್ರ ಸಂತೆ, ಛಾಯಾಚಿತ್ರ ಸಂತೆ, ಪುಸ್ತಕ ಸಂತೆ ಮತ್ತು ಆಹಾರ ಸಂತೆ ನಡೆಯಲಿದೆ ಎಂದು ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೃತ್ಯ, ಸಂಗೀತ, ರಸಮಂಜರಿ, ಕವಿಗೋಷ್ಠಿ, ಹಾಸ್ಯ, ಹರಟೆ, ಜಾದೂ ಪ್ರದರ್ಶನ, ಮಿಮಿಕ್ರಿ ಕೂಡ ಉತ್ಸವ ದಲ್ಲಿ ನಡೆಯಲಿದೆ. ಉತ್ಸವದ ಸಲುವಾಗಿ 32 ಸಮಿತಿಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಕಲಾವಿದರ ಮಾಹಿತಿಯನ್ನು ಆನ್ ಲೈನ್ನಲ್ಲಿ ಅಳವಡಿಸಲಾಗುವುದು ಮತ್ತು ಜಿಲ್ಲೆಯ ಹಲವು ಮಾಹಿತಿಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಪ್ರಕಟಿಸಲಾಗುವುದು ಎಂದರು.
ಜಿಲ್ಲೆಯ 1500 ಮಂದಿ ಏಕಕಾಲಕ್ಕೆ ನಾಡಗೀತೆ ಹಾಡಲಿದ್ದಾರೆ. ರಾಜ್ಯಮಟ್ಟದ ಚಿತ್ರಸಂತೆಗೆ 80 ಮಳಿಗೆಗಳನ್ನು ಹಾಕಲಾಗುವುದು. ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಸಮಿತಿಯ ಬಿ.ಬಸವರಾಜ ತಿಳಿಸಿದರು.
ಭವ್ಯ ಭಾರತ ಪರಿಕಲ್ಪನೆ ಅಡಿ ದೇಶಭಕ್ತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. 500 ಮೀಟರ್ ಉದ್ದದ ಕಾಗದದ ಮೇಲೆ ಸಾರ್ವಜನಿಕರು ಚಿತ್ರ ರಚಿಸಲು ಅನುವು ಮಾಡಲಾಗುವುದು ಎಂದರು.
ಸುಮಾರು 16 ಲಕ್ಷ ರುಪಾಯಿ ವೆಚ್ಚದಲ್ಲಿ ಉತ್ಸವವನ್ನು ಹಮ್ಮಿಕೊಳ್ಳಲಾಗುವುದು. ಪ್ರಾಯೋಜಕತ್ವಕ್ಕೂ ಪ್ರಯತ್ನಿಸಲಾಗುವುದು ಎಂದರು.
ಉತ್ಸವದಲ್ಲಿ ಪಾಲ್ಗೊಳ್ಳಲು ಬಯಸುವವರು 7337745561, 9591110159 ಮೊಬೈಲ್ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದರು.