ಹಗರಿಬೊಮ್ಮನಹಳ್ಳಿ: ಎಪಿಎಂಸಿ ಮಾಜಿ ಉಪಾಧ್ಯಕ್ಷ, ಹಾಲಿ ನಿರ್ದೇಶಕ ತಾಲ್ಲೂಕಿನ ವಲ್ಲಭಾಪುರ ಗ್ರಾಮದ ಬಿ.ಹುಲುಗಪ್ಪ ಮತಗಟ್ಟೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ. ಗುರುತಿನ ಚೀಟಿಯೊಂದಿಗೆ ತೆರಳಿದ್ದ ಅವರು ಮತಗಟ್ಟೆಯಲ್ಲಿ ಅಧಿಕಾರಿಗಳುನಿಮ್ಮ ಹೆಸರು ತೆಗೆಯಲಾಗಿದೆ ಎಂದು ಹೇಳಿದರು.
ಈಚೆಗೆ ಹುಲುಗಪ್ಪ ಅವರ ತಂದೆ ಬಟಾರಿ ಹುಲುಗಪ್ಪ ಮೃತರಾಗಿದ್ದರು, ಆದರೆ ತಂದೆಯ ಬದಲಾಗಿ ಮಗನ ಹೆಸರನ್ನು ಡಿಲಿಟ್ ಮಾಡಲಾಗಿದೆ ಎಂದು ವಲ್ಲಭಾಪುರ ಬಿಎಲ್ಒ ರಾಮಪ್ಪ ತಿಳಿಸಿದರು. ಈ ಕುರಿತಂತೆ ತಾಲ್ಲೂಕು ಕಚೇರಿಗೆ ಮಾಹಿತಿ ನೀಡಲಾಗಿತ್ತು, ಆದರೂ ಬದುಕಿರುವವರ ಹೆಸರನ್ನು ತೆಗೆಯಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸ ಗ್ರಾಮ ಪಂಚಾಯ್ತಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಲು ತಾಲ್ಲೂಕು ಆಡಳಿತ ಮತದಾನ ಮಾಡುವುದಕ್ಕೆ ವಂಚಿತರನ್ನಾಗಿ ಮಾಡಿದೆ ಎಂದು ಮಾರುತೆಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕೆಲಕಾಲ ಮತದಾನ ಕೇಂದ್ರದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಕೋರಿದರು.
ಗ್ರಾಮದ ತಾರಳ್ಳಿ ದ್ಯಾಮವ್ವ ಎನ್ನುವವರ ಹೆಸರನ್ನೂ ತೆಗೆಯಲಾಗಿದೆ. ಇವರ ಪತಿ ದುರುಗಪ್ಪ ನಿಧನರಾಗಿದ್ದರು. ಪತಿಯ ಬದಲಾಗಿ ಪತ್ನಿಯ ಹೆಸರನ್ನು ತೆಗೆಯಲಾಗಿದೆ.