ಹೊಸಪೇಟೆ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯವರು ಬುಧವಾರ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ತಾಲ್ಲೂಕು ಕಚೇರಿಗೆ ತೆರಳಿ ಮುಖ್ಯಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಎಚ್. ವಿಶ್ವನಾಥ್ ಅವರಿಗೆ ಸಲ್ಲಿಸಿದರು.
‘ರಾಜ್ಯದ 413 ಸರ್ಕಾರಿ ಪ್ರಥಮ ದರ್ಜೇ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಅವರಿಗೆ ಸೇವಾ ಭದ್ರತೆ ಇಲ್ಲ. ಸುಮಾರು ಮೂರು ದಶಕಗಳಿಂದ ‘ಅತಿಥಿ’ಗಳಾಗಿಯೇ ಕೆಲಸ ನಿರ್ವಹಿಸುತ್ತಿದ್ದು, ಬದುಕು ಅತಂತ್ರವಾಗಿದೆ’ ಎಂದು ಮನವಿಯಲ್ಲಿ ಗೋಳು ತೋಡಿಕೊಂಡಿದ್ದಾರೆ.
‘2019ರ ಯುಜಿಸಿ ಸುತ್ತೋಲೆ ಪ್ರಕಾರ, ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರತಿ ಬೋಧನಾ ಅವಧಿಗೆ ₹1,500 ಅಥವಾ ಮಾಸಿಕ ₹50,000 ವೇತನ ನಿಗದಿ ಮಾಡಬೇಕು. ಆದರೆ, ಇಂದಿಗೂ ಅದು ಜಾರಿಗೆ ಬಂದಿಲ್ಲ’ ಎಂದು ತಿಳಿಸಿದ್ದಾರೆ.
ಸಮಿತಿ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ, ರಾಜ್ಯ ಸಂಯೋಜಕಿ ಎಂ. ಉಮಾದೇವಿ, ಜಿಲ್ಲಾ ಸಂಚಾಲಕರಾದ ಪ್ರಶಾಂತ್ ಬಡಿಗೇರ್, ಪಂಪಾಪತಿ, ರವಿ, ಅತಿಥಿ ಉಪನ್ಯಾಸಕರಾದ ಕುಸುಮಾ, ಪದ್ಮಜಾ, ಷಣ್ಮುಖಪ್ಪ, ನಾಗಾರ್ಜುನ್, ಮಾರುತಿ, ಡಿ. ಬಸವರಾಜ, ದೀಪಕ್ ಇದ್ದರು.