ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ: ಡಿವೈಎಸ್ಪಿ ಕಾಶಿಗೌಡ ರಾಜೀನಾಮೆ

‘ಪ್ರಜಾವಾಣಿ’ ವರದಿ ಫಲಶ್ರುತಿ; ಹಂಪಿ ಕೋರ್‌ ಜೋನ್‌ನಲ್ಲಿ ಸ್ಫೋಟಕ್ಕೆ ಐಜಿಪಿ ತೀವ್ರ ಅಸಮಾಧಾನ
Last Updated 24 ಅಕ್ಟೋಬರ್ 2020, 21:28 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ ಡಿವೈಎಸ್ಪಿ ಎಸ್‌.ಎಸ್‌. ಕಾಶಿಗೌಡ ಅವರು ಅವರ ಹುದ್ದೆಗೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ.

‘ಹಂಪಿ ಕೋರ್‌ ಜೋನ್‌ನಲ್ಲಿ ನಿತ್ಯ ಸ್ಫೋಟ’ ಶೀರ್ಷಿಕೆ ಅಡಿ ಅ. 20ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಮರುದಿನ ಈ ಕುರಿತು ಸಂಪಾದಕೀಯವೂ ಪ್ರಕಟಗೊಂಡಿತ್ತು. ಅ. 22ರಂದು (ಗುರುವಾರ) ಹಂಪಿಯಲ್ಲಿ ನಡೆದ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ಡಿವೈಎಸ್ಪಿಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆದಿದೆ. ಒಂದು ಹಂತದಲ್ಲಿ ಬಳ್ಳಾರಿ ವಲಯದ ಐಜಿಪಿ ಎಂ. ನಂಜುಂಡಸ್ವಾಮಿ ಅವರು ಡಿವೈಎಸ್ಪಿ ಕಾಶಿಗೌಡ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ಮನನೊಂದು ಕಾಶಿಗೌಡ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ದೃಢಪಡಿಸಿವೆ.

‘ರಾಯಚೂರಿನ ಯಾಪಲದಿನ್ನಿ ಠಾಣೆಯಿಂದ ಕೆಲಸ ಆರಂಭಿಸಿದ ನಾನು ರಾಜ್ಯದ ಸುಮಾರು 37 ಕಡೆಗಳಲ್ಲಿ ಕೆಲಸ ನಿರ್ವಹಿಸಿದ್ದೇನೆ. ಕೀರ್ತಿ, ಅಪಕೀರ್ತಿ ಎಲ್ಲವನ್ನೂ ಇಲಾಖೆಯಲ್ಲಿ ಪಡೆದಿರುವೆ. ಪಿಎಸ್‌ಐ ಇದ್ದಾಗ ಎರಡು ಸಲ ರಾಜೀನಾಮೆ ಕೊಟ್ಟಿದ್ದೆ. ರಾಜೀನಾಮೆ ನೀಡಿ ಓಡಿ ಹೋಗುವುದು ಹೇಡಿಗಳ ಲಕ್ಷಣವೆಂದು ತಿಳಿದು ಆ ವಿಚಾರ ಕೈಬಿಟ್ಟಿದ್ದೆ. ಆದರೆ, ಐಜಿಪಿ ಅವರು ರಾಜೀನಾಮೆ ನೀಡುವಂತೆ ಸೂಚಿಸಿದ್ದರಿಂದ ಹಂಪಿಯಲ್ಲಿ ನನ್ನ ಕೆಲಸ ಮುಕ್ತಾಯಗೊಳಿಸಲು ನಿರ್ಧರಿಸಿ ಈ ತೀರ್ಮಾನಕ್ಕೆ ಬಂದಿರುವೆ’ ಎಂದು ಶುಕ್ರವಾರ ಅವರು ಸಲ್ಲಿಸಿರುವ ರಾಜೀನಾಮೆಯಲ್ಲಿ ತಿಳಿಸಿದ್ದಾರೆ.

ಅವರು ವಾಟ್ಸ್ಯಾಪ್‌ನಲ್ಲಿ ಬರೆದುಕೊಂಡಿರುವ ಈ ಪತ್ರದ ಸಾರಾಂಶ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.ಈ ಕುರಿತು ಐಜಿಪಿ ನಂಜುಂಡಸ್ವಾಮಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಸ್ಥಳಕ್ಕೆ ಭೇಟಿ

ಹಂಪಿಗೆ ಹೊಂದಿಕೊಂಡಂತೆ ಇರುವ ತಾಲ್ಲೂಕಿನ ಕಾಳಘಟ್ಟ, ಧರ್ಮದಗುಡ್ಡದಲ್ಲಿ ನಿತ್ಯ ಸ್ಫೋಟ ನಡೆಸಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಲಾಗುತ್ತಿದೆ. ಜೀವ ಸಂಕುಲಕ್ಕೆ ಕಂಟಕ ಎದುರಾಗಿದೆ ಎಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿದ ಬೆನ್ನಲ್ಲೇ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ವಿಷಯವನ್ನು ಸ್ಥಳೀಯ ರೈತರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಅಕ್ರಮದ ಮೂಲ ಐಜಿಪಿ ಕಚೇರಿ: ಆಡಿಯೊ ವೈರಲ್‌

‘ಐಜಿಪಿ ನನ್ನ ಕೆಳಗಿನ ಇನ್‌ಸ್ಪೆಕ್ಟರ್‌ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ಅವರ ಏಜೆಂಟ್‌ಗಳು ಬಂದು ಮಂತ್ಲಿ ಕಲೆಕ್ಟ್‌ ಮಾಡ್ತಾರೆ. ಯಾವುದೋ ಒಂದು ವಿಷಯದಲ್ಲಿ ಕಲೆಕ್ಟ್‌ ಮಾಡಿ ಕೊಡಬೇಕು ಅಂದಾಗ ನಾನು ಆಗಲ್ಲ ಎಂದೆ. ಅಕ್ರಮದ ಮೂಲವೇ ಅವರ ಕಚೇರಿ. ಅಕ್ರಮ ತಡೆಯುವ ವ್ಯಕ್ತಿಯೇ ಅದರಲ್ಲಿ ಭಾಗಿಯಾದರೆ ಅದನ್ನು ತಡೆಯುವುದಾದರೂ ಹೇಗೆ’ ಎಂದು ಡಿವೈಎಸ್ಪಿ ಕಾಶಿಗೌಡ ಪ್ರಶ್ನಿಸಿದ್ದಾರೆ.

‘ಯಾವುದಾದರೂ ಅಕ್ರಮದ ಕುರಿತು ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುವುದಿಲ್ಲ. ಬದಲಾಗಿ ಅದರಲ್ಲಿ ಶಾಮೀಲಾಗುತ್ತಾರೆ. ಪರಿಸ್ಥಿತಿ ಹೀಗಿರುವಾಗ ಕೆಲಸ ಮಾಡುವುದು ಹೇಗೆ? ವಿನಾಕಾರಣ ನಮ್ಮನ್ನು ಹಿಂಸಿಸುತ್ತಾರೆ. ಇದಕ್ಕೆ ಬೇಸತ್ತು ರಾಜೀನಾಮೆ ಸಲ್ಲಿಸಿರುವೆ. ರಾಜೀನಾಮೆ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಅದನ್ನು ಅಂಗೀಕರಿಸುವುದು ಬಿಡುವುದು ಸರ್ಕಾರಕ್ಕೆ ಬಿಟ್ಟದ್ದು’ ಎಂದು ಅವರು ವ್ಯಕ್ತಿಯೊಬ್ಬರೊಡನೆ ಮಾತನಾಡಿರುವ ದೂರವಾಣಿ ಕರೆಯ ಆಡಿಯೊ ಸಹ ವೈರಲ್‌ ಆಗಿದೆ.

ಕಲ್ಲು ಗಣಿಗಾರಿಕೆಗೆ ತಡೆ

ಹೊಸಪೇಟೆ ತಾಲ್ಲೂಕಿನ ಕಾಳಘಟ್ಟ, ಧರ್ಮದಗುಡ್ಡದ ಬಳಿ ಕಲ್ಲು ಗಣಿಗಾರಿಕೆಗೆ ತಡೆ ಬಿದ್ದಿದೆ. ಎರಡು ದಿನಗಳಿಂದ ಆ ಪ್ರದೇಶದಲ್ಲಿ ಯಾವುದೇ ರೀತಿಯ ಸ್ಫೋಟಗಳು ನಡೆಯುತ್ತಿಲ್ಲ ಎಂದು ಸ್ಥಳೀಯರು ಖಚಿತಪಡಿಸಿದ್ದಾರೆ.

‘ಉಪವಿಭಾಗಾಧಿಕಾರಿ ಶೇಕ್‌ ತನ್ವೀರ್‌ ಆಸಿಫ್‌ ಅವರ ಸೂಚನೆ ಮೇರೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಲ್ಲಿ ಎಲ್ಲ ಚಟುವಟಿಕೆಗಳು ನಿಂತಿವೆ. ಇಷ್ಟರಲ್ಲೇ ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹಾಗೂ ಪೊಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಸರ್ವೇ ನಡೆಸಲು ತೀರ್ಮಾನಿಸಲಾಗಿದೆ’ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT