ಹೊಸಪೇಟೆ: ‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದೊಂದಿಗೆ ಹಿಂದೂ ಶತಾಬ್ಧಿ ಆರಂಭವಾಗಲಿದೆ’ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದಿಂದ ಸೋಮವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ಚಿತ್ರಕೂಟದ ಶ್ರೀರಾಮ ಸಾಂಸ್ಕೃತಿಕ ಶೋಧ ಸಂಸ್ಥಾನ ನ್ಯಾಸ್ ವಕ್ತಾರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
‘2024ರ ಒಳಗೆ ರಾಮ ಮಂದಿರ ನಿರ್ಮಿಸುವ ಗುರಿ ಹೊಂದಲಾಗಿದೆ. ಅದರೊಂದಿಗೆ ಹಿಂದೂಗಳ ಕನಸು ನನಸಾಗಲಿದೆ’ ಎಂದರು.
‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಭಾರತೀಯ ಮುಸ್ಲಿಮರು ಆತಂಕ ಪಡಬೇಕಿಲ್ಲ. ಗೌರವದಿಂದ ಬದುಕಬಹುದು. ಹಿಂದೂಯೇತರ ಅಕ್ರಮ ವಲಸಿಗರಿಗೆ ಕಡಿವಾಣ ಹಾಕಿ, ದೇಶದ ಶಾಂತಿ ಕಾಪಾಡಲು, ಮಹಿಳೆಯರ ರಕ್ಷಣೆಗಾಗಿ ಕಾಯ್ದೆ ತರಲಾಗಿದೆ’ ಎಂದು ಹೇಳಿದರು.
‘ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಮಹಮ್ಮದಿಯರ ದಾಳಿಗೆ ಹಿಂದೂ ದೇವಸ್ಥಾನಗಳು, ದೇವರ ಮೂರ್ತಿಗಳು ಭಗ್ನಗೊಂಡು, ಪೂಜೆಯಿಂದ ವಂಚಿತಗೊಂಡಿರುವುದು ಬೇಸರ ಮೂಡಿಸಿದೆ’ ಎಂದು ತಿಳಿಸಿದರು.
ನ್ಯಾಸ್ ಪ್ರಮುಖ ರಾಮ ಅವತಾರ್ ಶರ್ಮಾ ಮಾತನಾಡಿ, ‘ಕಿಷ್ಕಿಂದೆ ಹನುಮನ ಜನ್ಮ ಭೂಮಿ. ಧಾರ್ಮಿಕ ಇತಿಹಾಸ ಹೊಂದಿರುವ ಸ್ಥಳ. ಅದನ್ನು ಯಾರು ಮರೆಯಕೂಡದು’ ಎಂದು ಹೇಳಿದರು.
ಪರಿಷತ್ತಿನ ಉತ್ತರ ಪ್ರಾಂತ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ, ರಾಜಮಾತೆ ಚಂದ್ರಕಾಂತ ದೇವಿ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್, ಮುಖಂಡರಾದ ನರಸಿಂಹಮೂರ್ತಿ, ಚಂದ್ರಕಾಂತ ಕಾಮತ್, ಬಸವರಾಜ ನಾಲತ್ವಾಡ, ಅನಂತ ಪದ್ಮನಾಭ ಇದ್ದರು.