ಹೊಸಪೇಟೆ: ಸದ್ಯಕ್ಕೆ ಮಳೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆ ಬುಧವಾರ ರಾತ್ರಿ ರೌದ್ರವತಾರ ತೋರಿಸಿತ್ತು. ಬಿರುಸು ಮಳೆಗೆ ನಗರದ ಚಿತ್ರವಾಡ್ಗಿ ರಸ್ತೆ, ಚಪ್ಪರದಹಳ್ಳಿ, ಪಟೇಲ್ ನಗರ, ಅಮರಾವತಿ ಸೇರಿದಂತೆ ಹಲವೆಡೆ ಮೊಳಕಾಲುದ್ದ ನೀರು ಸಂಗ್ರಹಗೊಂಡಿತ್ತು. ಚರಂಡಿಗಳು ಉಕ್ಕಿ ಹರಿದಿದ್ದವು. ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಪ್ರಾಂಗಣದ ತುಂಬೆಲ್ಲ ನೀರು ನಿಂತಿತ್ತು.
ತಾಲ್ಲೂಕಿನ ಕಮಲಾಪುರ, ಹಂಪಿ, ಹೊಸೂರು, ಕಡ್ಡಿರಾಂಪುರ, ಬಸವನದುರ್ಗ, ನಾಗೇನಹಳ್ಳಿ, ವಡ್ಡರಹಳ್ಳಿ, ಧರ್ಮಸಾಗರ, ಬೈಲುವದ್ದಿಗೇರಿ, ರಾಮಸಾಗರ, ಚಿನ್ನಾಪುರ, ನಲ್ಲಾಪುರ, ವ್ಯಾಸನಕೆರೆ, ಮರಿಯಮ್ಮನಹಳ್ಳಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದ್ದು, ಕೆಲವೇ ದಿನಗಳಲ್ಲಿ ರಾಶಿ ಆಗಬೇಕಿದ್ದ ಬೆಳೆ ನೆಲಕಚ್ಚಿದೆ.
ಗುರುವಾರ ಸಹ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಕಾರ್ಮೋಡ ಕವಿದಿತ್ತು. ತಂಗಾಳಿ ಬೀಸುತ್ತಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ಆರಂಭಗೊಂಡ ಮಳೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಇದರಿಂದಾಗಿ ವಾತಾವರಣ ಮತ್ತಷ್ಟು ತಂಪಾಗಿತ್ತು. ಸಂಜೆ ತುಂತುರು ಮಳೆ ಪುನಃ ಆರಂಭಗೊಂಡಿತ್ತು. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಬಿಸಿಲೂರು ಈಗ ತಂಪೂರು ಆಗಿ ಬದಲಾಗಿದೆ.