ಕೂಡ್ಲಿಗಿ: ಬುಧವಾರ ರಾತ್ರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಹರ್ಷ ಮೂಡಿಸಿದೆ.
ಸಂಜೆ ಅಲ್ಲಲ್ಲಿ ಸಾಧಾರಣ ಮಳೆಯಾದರೆ, ರಾತ್ರಿ 7 ಗಂಟೆಯ ನಂತರ ಗುಡುಗು, ಸಿಡಿಲಿನಿಂದ ಕೂಡಿದ ಬಿರುಸಿನ ಮಳೆ ಬಿದ್ದಿತು.
15 ದಿನಗಳಿಂದ ಮಳೆ ಇಲ್ಲದೆ ತಡವಾಗಿ ಬಿತ್ತನೆ ಮಾಡಿದ್ದ ಮೆಕ್ಕೆ ಜೋಳ, ರಾಗಿ, ಸಜ್ಜೆ ಸೇರಿದಂತೆ ಹಲವು ಬೆಳೆಗಳು ಬಾಡಲಾರಂಬಿಸಿದ್ದವು.
ಬುಧವಾರ ಬಿದ್ದ ಮಳೆಯಿಂದ ಬೆಳೆಗಳು ಚೇತರಿಕೆ ಕಂಡರೂ ಕೆಲವೆಡೆ ನೆಲಕಚ್ಚಿವೆ.ಈಗಾಗಲೇ ಕಟಾವಿಗೆ ಬಂದಿರುವ ಹೈಬ್ರಿಡ್ ಜೋಳ ಹಾಗೂ ಮೆಕ್ಕೆ ಜೋಳದ ಫಸಲು ಅನೇಕ ಜಮೀನುಗಳಲ್ಲಿ ನೆಲಕ್ಕೆ ಬಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಮಳೆಯಿಂದ ಹಾನಿಯಾದ ಬಗ್ಗೆ ಇನ್ನು ಯಾವುದೇ ಮಾಹಿತಿ ಬಂದಿಲ್ಲ, ಮಳೆ ಹಾನಿ ಮಾಹಿತಿ ಸಂಗ್ರಹಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಎಸ್. ಮಹಾಬಲೇಶ್ವರ ತಿಳಿಸಿದ್ದಾರೆ.