ಕೂಡ್ಲಿಗಿ: ತಾಲ್ಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಗಣಿತ ಶಿಕ್ಷಕ ಎನ್.ಎಂ. ಶ್ರೀಕಾಂತ್ ಅವರು ಶಾಲಾ ಕೊಠಡಿಯೊಂದನ್ನು ಬಳಸಿಕೊಂಡು ಗೋಡೆಯ ಮೇಲೆ ವಿವಿಧ ರೀತಿಯ ಲೆಕ್ಕ ಬಿಡಿಸಿ, ಅದನ್ನು ಗಣಿತ ಪ್ರಯೋಗಾಲಯವಾಗಿ ಬದಲಿಸಿದ್ದಾರೆ.
ಮಕ್ಕಳಿಗೆ ಸರಳವಾಗಿ ಅರ್ಥವಾಗಲು ಸೂತ್ರಗಳ ಚಾರ್ಟ್, ಗಣಿತ ಆಕೃತಿ, ಗ್ರಾಫ್ ಬೋರ್ಡ್, ಪೈಥಾಗೋರಸ್ ಪ್ರಮೇಯದ ಮಾದರಿ, ಕೋನಗಳ ವಿಧಗಳು, ತ್ರಿಕೋನಮಿತಿ ಮಾದರಿಗಳನ್ನು ಬಿಡಿಸಿದ್ದಾರೆ. ಎಲೆಕ್ಟ್ರಾನಿಕ್ ಕ್ವಿಜ್ ಬೋರ್ಡ್, ವೇದಿಕ್ ಗಣಿತ, ಸರಳ ಲೆಕ್ಕಗಳ ಮಾದರಿ ಗಮನ ಸೆಳೆಯುತ್ತವೆ.
ಇಲ್ಲಿ ಅಳವಡಿಸಿರುವ ಮಾದರಿಗಳನ್ನು ನೋಡಿಕೊಂಡು ವಿದ್ಯಾರ್ಥಿಗಳು ಲೆಕ್ಕಗಳನ್ನು ಸರಳವಾಗಿ ಬಿಡಿಸಬಹುದಾಗಿದೆ. 9ರಿಂದ 99ರ ವರಗೆ ಮಗ್ಗಿಗಳನ್ನು ಬರೆಯಲು ಅನುಕೂಲವಾಗುವಂತೆ ಫಲಕ ಹಾಗೂ ಕೋಡಿಂಗ್ ಮತ್ತು ಡಿಕೋಡಿಂಗ್ ಮೂಲಕ ಇತಿಹಾಸದ ದಿನಾಂಕಗಳನ್ನು ತಕ್ಷಣ ಕಂಡುಕೊಳ್ಳುವ ಮಾದರಿಯನ್ನು ಮಾಡಿದ್ದಾರೆ. ಸರಳ ನಿಯಮದಿಂದ ವರ್ಗ ಕಂಡು ಹಿಡಿಯುವ ಮಾದರಿ ಜೊತೆಗೆ ವಿವಿಧ ಬಗೆಯ ಫಲಕಗಳನ್ನು ಜೋಡಿಸಲಾಗಿದೆ.
ಇದರೊಂದಿಗೆ ಪ್ರೌಢ ಶಾಲೆಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಾಮಾನ್ಯ ಜ್ಞಾನ ಒದಗಿಸಲು ಅನೇಕ ಪುಸ್ತಕಗಳನ್ನು ಇಲ್ಲಿ ಇಡಲಾಗಿದೆ. ಇದರ ಜೊತೆಗೆ ವಿಶೇಷವಾಗಿ ದೈಹಿಕ ಅರ್ಹತೆ, ವಿದ್ಯಾರ್ಹತೆ ಸೇರಿದಂತೆ ಯಾವ ಯಾವ ಹುದ್ದೆಗೆ ಏನೇನು ಆರ್ಹತೆ ಇರಬೇಕು ಎಂಬ ಮಾಹಿತಿಯನ್ನೂ ನೀಡಲಾಗುತ್ತಿದೆ. ಇವರ ಪ್ರಯತ್ನಕ್ಕೆ ಸಹಕಾರಿಯಾಗಿ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಎಚ್.ಎಂ. ಸಚಿನ್ ಕುಮಾರ್ ಹಾಗೂ ಯುವ ಬ್ರಿಗ್ರೇಡ್ ಸದಸ್ಯರು ಸೇರಿ ₹5 ಸಾವಿರ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತ ಸರಳವಾಗಿ ಆರ್ಥವಾಗುವಂತೆ ರೂಪಿಸಲಾಗಿದೆ. ಇದಕ್ಕೆ ನನ್ನ ಪತ್ನಿ ಶಿಕ್ಷಕಿ ಗಂಗಮ್ಮ, ಮುಖ್ಯ ಶಿಕ್ಷಕರು ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷರು, ಗ್ರಾಮಸ್ಥರ ಸಹಕಾರದಿಂದ ಈ ಕಾರ್ಯ ಮಾಡಲು ಸಾಧ್ಯವಾಗಿದೆ’ ಎಂದು ಪ್ರಯೋಗಲಯ ನಿರ್ಮಿಸಿದ ಗಣಿತ ಶಿಕ್ಷಕ ಎನ್.ಎಂ. ಶ್ರೀಕಾಂತ್ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.