ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿಯಲ್ಲಿ ಪ್ರವಾಸಿಗರ ಪಾದರಕ್ಷೆಗಿಲ್ಲ ಸುರಕ್ಷತೆ!

Last Updated 27 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಪ್ರವಾಸಿಗರ ಪಾದರಕ್ಷೆಗಳಿಗೆ ಸುರಕ್ಷತೆ ಇಲ್ಲದಂತಾಗಿದೆ.

ವಿರೂಪಾಕ್ಷ ದೇಗುಲದ ಬಿಷ್ಟಪ್ಪಯ್ಯ ಗೋಪುರ ದಾಟಿಕೊಂಡು ಒಳಹೋದರೆ ಬಲಗಡೆಯಲ್ಲಿ ಪ್ರವಾಸಿಗರು ಪಾದರಕ್ಷೆ ಬಿಡಲು ವ್ಯವಸ್ಥೆ ಮಾಡಲಾಗಿತ್ತು.ಪ್ರವಾಸಿಗರಿಂದ ಪ್ರತಿ ಜೋಡಿಗೆ ₹2 ಪಡೆದು, ಅವರು ದೇವರ ದರ್ಶನ ಮುಗಿಸಿಕೊಂಡು ಬರುವವರೆಗೆ ಅಲ್ಲಿನ ಸಿಬ್ಬಂದಿ ಪಾದರಕ್ಷೆ, ಷೂ, ಸ್ಯಾಂಡಲ್‌ಗಳನ್ನು ಕಾಯುತ್ತಿದ್ದರು. ಆದರೆ, ಒಂದು ತಿಂಗಳಿಂದ ಈ ವ್ಯವಸ್ಥೆ ಇಲ್ಲದಾಗಿದೆ.

ದೇಶ–ವಿದೇಶಗಳಿಂದ ನಿತ್ಯ ನೂರಾರು ಜನ ಪ್ರವಾಸಿಗರು ಹಂಪಿಗೆ ಬರುತ್ತಾರೆ. ಅಲ್ಲಿಗೆ ಬಂದವರು ತಪ್ಪದೇ ರಥಬೀದಿಯಲ್ಲಿ ಗಮನ ಸೆಳೆಯುವ ವಿರೂಪಾಕ್ಷ ದೇಗುಲಕ್ಕೆ ಭೇಟಿ ಕೊಡುವುದು ಸಹಜ. ಅನೇಕ ಜನ ಬೆಲೆಬಾಳುವ ಪಾದರಕ್ಷೆ, ಷೂಗಳೊಂದಿಗೆ ಬರುತ್ತಾರೆ. ಆದರೆ, ಅವುಗಳನ್ನು ಬಿಟ್ಟು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ದೇವರ ದರ್ಶನಕ್ಕಾಗಿ ಜನ ದೇಗುಲದ ಹೊರಭಾಗದಲ್ಲಿ ಪಾದರಕ್ಷೆಗಳನ್ನು ಬಿಟ್ಟು ಹೋದರೆ ಕಳುವಾಗುತ್ತಿವೆ. ಕಳೆದ ಒಂದು ತಿಂಗಳಿಂದ ಇದು ಸಾಮಾನ್ಯವಾಗಿದೆ. ಅನೇಕ ಪ್ರವಾಸಿಗರು ಪಾದರಕ್ಷೆಗಳನ್ನು ಕಳೆದುಕೊಂಡು ಪೇಚಿಗೆ ಸಿಲುಕಿದ್ದಾರೆ. ಕೆಂಡದಂತಹ ಬಿಸಿಲಿನಲ್ಲಿ ಹಂಪಿಯಲ್ಲಿ ಬರಿಗಾಲಿನಲ್ಲಿ ಓಡಾಡಲು ಸಾಧ್ಯವಾಗದೆ ಗೊಣಗಿಕೊಂಡು ಹೋಗಿದ್ದಾರೆ.

ಪಾದರಕ್ಷೆಗಳನ್ನು ಕಳುವು ಮಾಡುತ್ತಿರುವುದು ಹೆಚ್ಚಾದ ನಂತರ, ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಹೋಗುವ ಪ್ರವಾಸಿಗರಿಗೆ ಅವರು ಬಂದ ವಾಹನಗಳಲ್ಲಿಯೇ ಪಾದರಕ್ಷೆಗಳನ್ನು ಬಿಟ್ಟು ಹೋಗುವಂತೆ ಹಂಪಿ ಮಾರ್ಗದರ್ಶಿಗಳು ಸಲಹೆ ಮಾಡುತ್ತಿದ್ದಾರೆ. ಆದರೆ, ದೇಗುಲದಿಂದ ಸುಮಾರು 500 ಮೀಟರ್‌ಗೂ ಹೆಚ್ಚು ದೂರದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ. ಅಲ್ಲಿಂದ ರಥಬೀದಿ ಮೂಲಕ ಬರಿಗಾಲಲ್ಲಿ ದೇವಸ್ಥಾನಕ್ಕೆ ಹೋಗುವುದು ಕಷ್ಟವಾಗುತ್ತಿದೆ. ರಥಬೀದಿಯಲ್ಲಿ ಸಿ.ಸಿ. ರಸ್ತೆ ಇದೆ. ಇನ್ನು ದೇಗುಲದ ಹೊರಭಾಗದಿಂದ ಒಳಭಾಗದ ವರೆಗೆ ಕಲ್ಲಿನ ಹಾಸು ಹಾಕಲಾಗಿದೆ. ಬಿಸಿಲಿನಿಂದ ನೆಲ ಕಾದು ಕೆಂಡವಾಗುತ್ತಿದೆ. ಇದರಿಂದ ಪ್ರವಾಸಿಗರು ಪಡಬಾರದ ಕಷ್ಟ ಪಡುತ್ತಿದ್ದಾರೆ.

ಸಮಸ್ಯೆಗೆ ಕಾರಣವೇನು?

ಅನೇಕ ವರ್ಷಗಳಿಂದ ದೇವಾಲಯದ ಪರಿಸರದಲ್ಲಿ ಪ್ರವಾಸಿಗರು ಪಾದರಕ್ಷೆ ಬಿಡಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಪಾದರಕ್ಷೆ ಇಡುವ ಜಾಗವನ್ನು ದೇವಸ್ಥಾನದ ಒಳಭಾಗದಿಂದ ಹೊರಗೆ ಸ್ಥಳಾಂತರಿಸಿದೆ.

ನಾಲ್ಕು ತಿಂಗಳ ಹಿಂದೆಯಷ್ಟೇ ಟೆಂಡರ್‌ ಪಡೆದವವರು, ದೇಗುಲದ ಹೊರಭಾಗದಲ್ಲಿ ಪಾದರಕ್ಷೆ ನೋಡಿಕೊಳ್ಳುವಂತೆ ಹೇಳಿದ್ದರಿಂದ ನಷ್ಟವಾಗುತ್ತಿದೆ ಎಂದು ಕಾರಣ ಕೊಟ್ಟು ಕೆಲಸ ನಿರ್ವಹಿಸದೆ ಹೋಗಿದ್ದಾರೆ. ಇದರಿಂದ ಸದ್ಯ, ಪ್ರವಾಸಿಗರ ಪಾದರಕ್ಷೆಗಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದಂತಾಗಿದೆ. ವಿದೇಶದಿಂದ ಬೆಲೆಬಾಳುವ ಪಾದರಕ್ಷೆ, ಷೂಗಳನ್ನು ಬಿಟ್ಟು ಹೋದರೆ ಕೆಲವರು ಇದೇ ಸಂದರ್ಭವೆಂದು ತಿಳಿದು ಕಳುವು ಮಾಡುತ್ತಿದ್ದಾರೆ.

‘ಅನೇಕ ಜನ ಪ್ರವಾಸಿಗರು, ಅದರಲ್ಲೂ ವಿದೇಶಿಯರ ಪಾದರಕ್ಷೆಗಳು ಕಳುವಾಗಿವೆ. ಇದರಿಂದ ಅವರಿಗೆ ಸಹಜವಾಗಿಯೇ ಬೇಜಾರಾಗುತ್ತಿದೆ. ಏನು ಹೇಳಬೇಕು ಎಂದು ಮಾರ್ಗದರ್ಶಿಗಳಿಗೂ ಗೊತ್ತಾಗುತ್ತಿಲ್ಲ. ನಿತ್ಯ ನೂರಾರು ಜನ ಪ್ರವಾಸಿಗರು ಬರುವ ಸ್ಥಳದಲ್ಲಿ ಏನಾದರೂ ತುರ್ತಾ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಹಂಪಿಗೆ ಕೆಟ್ಟ ಹೆಸರು ಬರುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಹಂಪಿ ಮಾರ್ಗದರ್ಶಿ ಗೋಪಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT