ವಿಜಯನಗರ (ಹೊಸಪೇಟೆ): ‘ದಮನಿತರ ಪರ ನಿಂತ ಮೊದಲ ಮಹಿಳೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ’ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಇಮಾಮ್ ನಿಯಾಜಿ ತಿಳಿಸಿದರು.
ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವಿಜಯನಗರ ಜಿಲ್ಲಾ ಸಮಿತಿ ರಚನೆ, ಸಾವಿತ್ರಿಬಾಯಿ ಫುಲೆ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಮಹಿಳಾ ಶಿಕ್ಷಕಿ. ಹೀಗಾಗಿಯೇ ಅವರನ್ನು ಅಕ್ಷರದವ್ವ ಎಂದು ಕರೆಯುತ್ತಾರೆ. ದಮನಿತರಿಗಾಗಿ ಅವರು ಸಾಕಷ್ಟು ತ್ಯಾಗ ಮಾಡಿದ್ದರು. ಶೋಷಿತರ ಪರ ನಿಂತು ಅವರ ಅಕ್ಷರದ ಹಸಿವು ನೀಗಿಸಿದ ಮಹಾತಾಯಿ ಅವರು’ ಎಂದರು.
‘ಸತಿ ಪದ್ಧತಿ, ಬಾಲ್ಯ ವಿವಾಹ, ವಿಧವಾ ಹಿಂಸೆಯಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದರು. ಪುರುಷರಂತೆ ಮಹಿಳೆಯರಿಗೆ ಶಿಕ್ಷಣ ಸೇರಿದಂತೆ ಎಲ್ಲ ಸವಲತ್ತು ಒದಗಿಸಿಕೊಡಲು ಶ್ರಮಿಸಿದ್ದರು’ ಎಂದು ಹೇಳಿದರು.
ಚಿಂತಕ ಸೋಮಕ್ಕ ಮಾತನಾಡಿ, ‘ದೇಶದಲ್ಲಿ ಸಂವಿಧಾನ, ಪ್ರಜಾಪ್ರಭುತ್ವದ ಬೇರುಗಳು ಇನ್ನಷ್ಟು ಆಳ ಇಳಿಯಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು’ ಎಂದರು.
ಸಮಿತಿ ಸಂಘಟನಾ ಸಂಚಾಲಕರಾದ ಗ್ಯಾನಪ್ಪ ಬಡಿಗೇರ, ಯಲ್ಲಪ್ಪ ಹಳೆಮನೆ, ರಾಜ್ಯ ಸಮಿತಿ ಸದಸ್ಯ ಚಿದಾನಂದ, ತಾಲ್ಲೂಕು ಸಂಚಾಲಕ ಗೋಪಿನಾಥ್, ಮಹಿಳಾ ಒಕ್ಕೂಟದ ತಾಲ್ಲೂಕು ಸಂಚಾಲಕ ವಿ.ಯಮುನಮ್ಮ, ದೇವರಾಜ್, ಆರ್. ಭಾಸ್ಕರ್ ರಾಮ್ ಇದ್ದರು.