ಹೊಸಪೇಟೆ (ವಿಜಯನಗರ): ‘ಕುಮಾರವ್ಯಾಸ ಭಾರತ ಮತ್ತು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದಲ್ಲಿ ಸಾಮಾಜಿಕ ಮೌಲ್ಯಗಳು, ಜೀವನದ ಅನುಭಾವ ಸಾರವಿದೆ’ ಎಂದು ಸಾಹಿತಿ ಪ್ರೊ.ಯು. ರಾಘವೇಂದ್ರರಾವ್ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಷಾ ಭವರಲಾಲ್ ಬಾಬುಲಾಲ್ ನಹರ್ ಕಾಲೇಜಿನ ಸಹಭಾಗಿತ್ವದಲ್ಲಿ ಗುರುವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕುಮಾರವ್ಯಾಸ ಭಾರತ ಮತ್ತು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಮಹತ್ವ ಕುರಿತು ಮಾತನಾಡಿದರು.
ಮಂಕುತಿಮ್ಮನ ಕಗ್ಗದಲ್ಲಿ 945 ಪದ್ಯಗಳು ಜೀವನದ ಅಮೃತವಾಣಿಗಳಿವೆ. ಕೃತಿ ಸಣ್ಣದಾದರೂ ಸಾಹಿತ್ಯ ತುಂಬಾ ಘನವಾಗಿದೆ. ಸಾಮಾಜಿಕ ಜೀವನದ ಪರಾಮರ್ಶೆ, ಅನುಭಾವಗಳು ತುಂಬಿವೆ. ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ. ನಮ್ಮೆಲ್ಲರ ಬದುಕಿನ ಸಾಮರಸ್ಯ ಸಮನ್ವಯತೆಯ ದರ್ಶನ ಕಾಣುತ್ತೇವೆ ಎಂದರು.
ಕಾಲೇಜಿನ ಅಧ್ಯಕ್ಷ ಕರಿಬಸವರಾಜ ಬಾದಾಮಿ ಉದ್ಘಾಟಿಸಿ, ವಿಜಯನಗರ ಕನ್ನಡ ಸಾಹಿತ್ಯ, ಸಂಸ್ಕೃತಿಯ ತವರೂರಾಗಿದೆ ಎಂದು ಹೇಳಿದರು.
ಪ್ರಾಂಶುಪಾಲ ಎನ್. ವಿಶ್ವನಾಥಗೌಡ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ನಾಯಕರ ಹುಲುಗಪ್ಪ, ಗೌರವ ಕಾರ್ಯದರ್ಶಿ ಎಂ. ಉಮಾ ಮಹೇಶ್ವರ, ಸಮಿತಿ ಸದಸ್ಯ ಸೋ.ದಾ. ವಿರೂಪಾಕ್ಷಗೌಡ, ಪ್ರಾಧ್ಯಾಪಕರಾದ ಶೋಭಾ ಪಾಟೀಲ, ಜಗದೀಶ್, ಶಿವನಗೌಡ ಸಾತ್ಮರ್ ಇದ್ದರು.