ಹೊಸಪೇಟೆ (ವಿಜಯನಗರ): ಜಿಲ್ಲಾ ಖನಿಜ ನಿಧಿ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹3.25 ಕೋಟಿ ಅನುದಾನದಲ್ಲಿ ಎರಡು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಗುರುವಾರ ನಗರದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು.
ಖನಿಜ ನಿಧಿ ₹90 ಲಕ್ಷದಲ್ಲಿ ವಾಲ್ಮೀಕಿ ವೃತ್ತದಿಂದ ಉದ್ಯೋಗ ಪೆಟ್ರೋಲ್ ಬಂಕ್ ವರೆಗಿನ ರಸ್ತೆ, ₹1.75 ಕೋಟಿಯಲ್ಲಿ ಉದ್ಯೋಗ ಪೆಟ್ರೋಲ್ ಬಂಕ್ನಿಂದ ಕನಕದಾಸ ವೃತ್ತದವರೆಗೆ ಹಾಗೂ ಮಂಡಳಿಯ ₹60 ಲಕ್ಷದಲ್ಲಿ ಮೀರ್ ಆಲಂ ಚಿತ್ರಮಂದಿರ ಸಮೀಪದ ರಸ್ತೆ ಅಭಿವೃದ್ಧಿ ಸೇರಿವೆ.
ಗುರುವಾರ ನಗರದಲ್ಲಿ ಭೂಮಿ ಪೂಜೆ ನೆರವೇರಿಸಿದ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಅಶೋಕ ಜೀರೆ, ‘ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಒಂದೊಂದಾಗಿ ಆರಂಭವಾಗುತ್ತಿವೆ. ನಗರದ ವಿವಿಧ ಮುಖ್ಯರಸ್ತೆಗಳ ಅಭಿವೃದ್ಧಿ ಕಾಮಗಾರಿ ಶುರುವಾಗಿದೆ. ಜೊತೆಗೆ ಕೆಲ ಏರಿಯಾಗಳ ಸಿ.ಸಿ ರಸ್ತೆಗಳು ಸಹ ಅಭಿವೃದ್ಧಿಯಾಗುತ್ತಿವೆ. ರಸ್ತೆಗಳ ಅಭಿವೃದ್ಧಿಯಿಂದ ಸುಗಮ ಸಂಚಾರಕ್ಕೆ ಅನುವಾಗಲಿದೆ’ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರ ಆಪ್ತ ಸಹಾಯಕ ಧರ್ಮೇಂದ್ರ ಸಿಂಗ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಿಶೋರ್ ಕುಮಾರ್, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಬೋಡ ರಾಮಪ್ಪ, ಸಾಲಿ ಸಿದ್ದಯ್ಯ ಸ್ವಾಮಿ ಇದ್ದರು.