ಇಡೀ ನದಿ ದಂಡೆಗೆ ವಿಶೇಷ ರೀತಿಯಲ್ಲಿ ಅಲಂಕರಿಸಿದ್ದರು. ನದಿ ಮಧ್ಯ ಇರುವ ಬಂಡೆಗಲ್ಲುಗಳಿಗೆ ವಿಭೂತಿ ಬಳಿದಿದ್ದರು. ಅಲ್ಲಿರುವ ನಂದಿ ವಿಗ್ರಹಗಳಿಗೆ ಹೂವಿನಿಂದ ಸಿಂಗರಿಸಿದ್ದರು. ಕಲ್ಲುಗಳ ಮೇಲೆ ತುಂಗಭದ್ರಾ ಆರತಿ ಬರಹ, ವರಹ, ನಂದಿ ಚಿತ್ರ ಕಂಗೊಳಿಸಿತು. ದೀಪಗಳಿಂದ ಇಡೀ ನದಿಗೆ ಅಲಂಕರಿಸಿದ್ದರಿಂದ ಇಡೀ ಪರಿಸರಕ್ಕೆ ವಿಶೇಷ ಕಳೆ ಬಂದಿತ್ತು. ತುಂಗಾ ಆರತಿಗೆ ಸಾಕ್ಷಿಯಾಗಲು ನದಿ ತಟದಲ್ಲಿ ಕಿಕ್ಕಿರಿದು ಜನ ಸೇರಿದ್ದರು. ತಾಯಿ ಭುವನೇಶ್ವರಿ, ವಿರೂಪಾಕ್ಷೇಶ್ವರನ ಜಯಘೋಷದ ನಡುವೆ ಸಚಿವ ಆನಂದ್ ಸಿಂಗ್ ಅವರು ನದಿಗೆ ಬಾಗಿನ ಸಮರ್ಪಿಸಿ, ತುಂಗೆಗೆ ಆರತಿ ಬೆಳಗಿದರು. ಪಟಾಕಿ ಸುಡುವುದು ನಿಷೇಧಿಸಿದ್ದರಿಂದ ಈ ಸಲ ಆಕಾಶದಲ್ಲಿ ಚಿತ್ತಾರ ಕಾಣಲಿಲ್ಲ.