ಬೆಂಗಳೂರು: ಕೆಎಸ್ಆರ್ಟಿಸಿ ಮಾದರಿಯಲ್ಲಿ ಬಿಎಂಟಿಸಿ ಸಿಬ್ಬಂದಿಗೂ ₹ 1 ಕೋಟಿ ಅಪಘಾತ ವಿಮೆ ಯೋಜನೆಯನ್ನು ಸರ್ಕಾರ ಸೋಮವಾರ ಜಾರಿ ಮಾಡಿದೆ.
ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ ಅನುಕೂಲವಾಗುವಂತೆ ಇಲಾಖಾ ಗುಂಪು ವಿಮಾ ಪರಿಹಾರ ₹3 ಲಕ್ಷ ನೀಡುವ ಯೋಜನೆ 2008ರಿಂದಲೇ ಜಾರಿಯಲ್ಲಿದೆ. ಕೆನರಾ ಬ್ಯಾಂಕ್ನಲ್ಲಿ ವೇತನ ಖಾತೆ ಹೊಂದಿರುವ ಬಿಎಂಟಿಸಿ ನೌಕರರು ಮೃತಪಟ್ಟರೆ ₹30 ಲಕ್ಷ ಪರಿಹಾರ ನೀಡುವ ವಿಮಾ ಯೋಜನೆ 2022ರಲ್ಲಿ ಜಾರಿಯಾಗಿತ್ತು.
ಇದೀಗ ಯೂನಿಯನ್ ಬ್ಯಾಂಕ್ (ವಿಮೆ ₹65 ಲಕ್ಷ), ಎಸ್ಬಿಐ ಮತ್ತು ಕೆನರಾ ಬ್ಯಾಂಕ್ಗಳೊಂದಿಗೆ (ವಿಮೆ ತಲಾ ₹50 ಲಕ್ಷ) ಬಿಎಂಟಿಸಿ ಒಡಂಬಡಿಕೆ ಮಾಡಿಕೊಂಡಿದೆ. ನೌಕರರು ಮೃತಪಟ್ಟರೆ ಅವರ ಕುಟುಂಬಕ್ಕೆ ಒಟ್ಟು ₹1.15 ಕೋಟಿ ಪರಿಹಾರ ಸಿಗಲಿದೆ.
ಸೇವಾವಧಿಯಲ್ಲಿ ಅಪಘಾತ ಹೊರತುಪಡಿಸಿ ಕಾಯಿಲೆಗಳಿಂದ ಮೃತಪಟ್ಟವರಿಗೆ ನೀಡುತ್ತಿದ್ದ ವಿಮಾ ಪರಿಹಾರ ಮೊತ್ತವನ್ನು ₹3 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ತಿಳಿಸಿದ್ದಾರೆ.