ದೇವನಹಳ್ಳಿ: ಕೋವಿಡ್ ಭೀತಿಯ ನಡುವೆಯೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಪ್ರಯಾಣಿಕರ ಭಾರಿ ದಟ್ಟಣೆ ಕಂಡು ಬಂದಿತು.
ಕ್ರಿಸ್ಮಸ್ ಮತ್ತು ವರ್ಷಾಂತ್ಯ ಆಚರಣೆ ಮತ್ತು ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಶನಿವಾರ ಒಂದೇ ದಿನ 80 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗ್ಗೆಯಿಂದಲೇ ವಿಮಾನ ನಿಲ್ದಾಣವು ಪ್ರಯಾಣಿಕರಿಂದ ತುಂಬಿತ್ತು. ಹೆಚ್ಚುವರಿ ಲಗೇಜ್ ಪರಿಶೀಲನೆ, ಶುಲ್ಕ ಪಾವತಿ ಕೌಂಟರ್ ಬಳಿ ಉದ್ದನೆಯ ಸರದಿ ಸಾಲು ಕಂಡು ಬಂದಿತು.ಪ್ರಯಾಣಿಕರನ್ನು ನಿಯಂತ್ರಿಸುವಷ್ಟರಲ್ಲಿ ಭದ್ರತಾ ಸಿಬ್ಬಂದಿ ಹೈರಾಣಾದರು.
ದಟ್ಟನೆ ತಪ್ಪಿಸಲು 3, 4 ಮತ್ತು 9 ನಿರ್ಗಮನ ದ್ವಾರಗಳನ್ನು ಡಿಜಿ ಯಾತ್ರಾ ಬಳಕೆದಾರರಿಗೆ ಮೀಸಲಿಡಲಾಗಿದೆ. ಅದಕ್ಕಾಗಿ ವಾಟ್ಸ್ಆ್ಯಪ್ ಸಹಾಯವಾಣಿ 24 ಗಂಟೆ ಕಾರ್ಯ ನಿರ್ವಹಿಸುತ್ತಿದೆ.
ಮಾರ್ಗಸೂಚಿಯಂತೆ ವಿಮಾನ ನಿಲ್ದಾಣದ ಪ್ರಿ ಇಮಿಗ್ರೇಷನ್ ಸ್ಥಳದಲ್ಲಿ ರ್ಯಾಂಡಮ್ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ವಿದೇಶಿ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಸೇರಿದಂತೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ಪೂರ್ಣ ಪ್ರಮಾಣದ ಲಸಿಕೆ ಪಡೆದ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ವರದಿ ಅಗತ್ಯ ಇಲ್ಲ. ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ವಿಮಾನ ನಿಲ್ದಾಣ ಸಿಬ್ಬಂದಿ ಸನ್ನದ್ಧವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.