ಮೈಸೂರು: ಅಂತರ್ಜಲ ಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಕೊಳವೆಬಾವಿ ಕೊರೆಯುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶಕ್ಕೆ ಜಿಲ್ಲಾ ಬೋರ್ವೆಲ್ ಗುತ್ತಿಗೆದಾರರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ನಿಯಮ ಸಡಿಲಿಸುವಂತೆ ಒತ್ತಾಯಿಸಿ ಹೋರಾಟ ರೂಪಿಸಲು ಸಜ್ಜಾಗಿದೆ.
ಜಿಲ್ಲೆಯ ಬೋರ್ವೆಲ್ ಗುತ್ತಿಗೆದಾರರು ಲಿಂಗದೇವರಕೊಪ್ಪಲಿನಲ್ಲಿ ಭಾನುವಾರ ಸಭೆ ನಡೆಸಿದರು. ರೈತರು, ಕೊಳವೆಬಾವಿ ಕೊರೆಯುವ ಯಂತ್ರಗಳ ಮಾಲೀಕರೊಂದಿಗೆ ಸೋಮವಾರ ಮತ್ತೊಮ್ಮೆ ಚರ್ಚಿಸಲು ತೀರ್ಮಾನಿಸಿದರು. ಕೊಳವೆಬಾವಿ ಕೊರೆಯುವ 36 ಯಂತ್ರ (ರಿಗ್) ಹಾಗೂ ಇವುಗಳೊಂದಿಗೆ ಸಾಗುವ 36 ಲಾರಿಗಳು ಕಾರ್ಯವನ್ನು ಸ್ಥಗಿತಗೊಳಿಸಿವೆ.
ಜಿಲ್ಲೆಯ ಅಂತರ್ಜಲದ ಸ್ಥಿತಿಗತಿ ಕುರಿತು ಜಿಲ್ಲಾಡಳಿತ ಫೆ.2ರಂದು ಸಭೆ ನಡೆಸಿತ್ತು. ಅಂತರ್ಜಲ ಅಪಾಯಕಾರಿ ಮಟ್ಟ ತಲುಪಿರುವ ಕುರಿತು ತಜ್ಞರು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ, ಕೊಳವೆಬಾವಿ ಕೊರೆಯುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು ಫೆ.3ರಂದು ಆದೇಶ ಹೊರಡಿಸಿದ್ದರು.
‘ಅಂತರ್ಜಲಕ್ಕೆ ಸಂಬಂಧಿಸಿ 2013ರಲ್ಲಿ ನಡೆದ ಸಮೀಕ್ಷೆಯ ವರದಿಯ ಆಧಾರದ ಮೇರೆಗೆ ನಿರ್ಬಂಧ ವಿಧಿಸುವುದು ತಪ್ಪು. ಸತತ ಬರ ಪರಿಸ್ಥಿತಿಯ ಪರಿಣಾಮ ಆ ಸಂದರ್ಭದಲ್ಲಿ ಅಂತರ್ಜಲ ಮಟ್ಟ ಕುಸಿದಿತ್ತು. ಕೊರೆದ ಶೇ 70ರಷ್ಟು ಬಾವಿಗಳು ವಿಫಲವಾಗುತ್ತಿದ್ದವು. ಕಳೆದ ವರ್ಷ ಮಳೆ ಸುರಿದಿದ್ದರಿಂದ ಪರಿಸ್ಥಿತಿ ಬದಲಾಗಿದೆ’ ಎಂದು ಜಿಲ್ಲಾ ಬೋರ್ವೆಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
‘500 ಮೀಟರ್ ವ್ಯಾಪ್ತಿಯ ಒಳಗೆ ತೆರೆದ ಬಾವಿ, ಕೈಪಂಪು ಹಾಗೂ ಬೋರ್ವೆಲ್ ಇದ್ದರೆ ಮತ್ತೊಂದು ಬಾವಿ ಕೊರೆಯಲು ಅವಕಾಶ ನಿರಾಕರಿಸಲಾಗುತ್ತಿದೆ. ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ಗ್ರಾಮೀಣ ಪ್ರದೇಶ ಹಾಗೂ ನಗರದ ಹಲವು ಬಡಾವಣೆಗಳಲ್ಲಿ ಹೊಸ ಕೊಳವೆಬಾವಿ ಕೊರೆಯಲು ಸಾಧ್ಯವಾಗುವುದಿಲ್ಲ. 2,500 ಅಡಿ ಕೊರೆಯುವ ಕೋಲಾರ ಜಿಲ್ಲೆಯಲ್ಲಿ ಇಲ್ಲದ ನಿಯಮ ಮೈಸೂರಿನಲ್ಲಿ ಏಕೆ’ ಎಂದು ಪ್ರಶ್ನಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.