ಬೆಂಗಳೂರು: ಪತ್ನಿ ಇದ್ದರೂ ತನ್ನನ್ನು ಮದುವೆಯಾಗುವಂತೆ ನಾದಿನಿಯನ್ನು ಪೀಡಿಸಿ, ಅಪಹರಣ ಮಾಡಿದ್ದ ಆರೋಪದಡಿ ದೇವರಾಜ್ ಎಂಬಾತನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
‘ನಗರದ ಶಾಪಿಂಗ್ ಮಾಲ್ವೊಂದರಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿಯನ್ನು ಜ. 22ರಂದು ಅಪಹರಣ ಮಾಡಲಾಗಿತ್ತು. ಈ ಬಗ್ಗೆ ಕುಟುಂಬಸ್ಥರು ದೂರು ನೀಡಿದ್ದರು. ಹಾಸನದ ಸಕಲೇಶಪುರದಲ್ಲಿದ್ದ ಆರೋಪಿ ದೇವರಾಜ್ ಹಾಗೂ ಆತನ ಸಹಚರರನ್ನು ಬಂಧಿಸಲಾಗಿದ್ದು, ಯುವತಿಯನ್ನು ರಕ್ಷಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿ ದೇವರಾಜ್, ಯುವತಿಯ ಅಕ್ಕನನ್ನು ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ. ಯುವತಿ ಮೇಲೂ ಕಣ್ಣು ಹಾಕಿ, ಅವರನ್ನೂ ಮದುವೆಯಾಗಲು ಮುಂದಾಗಿದ್ದ. ಯುವತಿ ಹಾಗೂ ಅವರ ಕುಟುಂಬದವರನ್ನು ಪೀಡಿಸುತ್ತಿದ್ದ.’
‘ಮದುವೆಗೆ ಯುವತಿ ಒಪ್ಪಿರಲಿಲ್ಲ. ಅದೇ ವಿಚಾರವಾಗಿ ಆರೋಪಿ ಹಲವು ಬಾರಿ ಮನೆಯಲ್ಲಿ ಗಲಾಟೆ ಮಾಡಿದ್ದ. ಯುವತಿ ಕೆಲಸಕ್ಕೆ ಹೋಗುವುದನ್ನು ತಿಳಿದಿದ್ದ ಆರೋಪಿ, ಅಪಹರಣ ಮಾಡಿ ಮದುವೆಯಾಗಲು ಸಂಚು ರೂಪಿಸಿದ್ದ. ಇದಕ್ಕಾಗಿ ತನ್ನ ಸಹಚರರ ಸಹಾಯ ಪಡೆದಿದ್ದ‘ ಎಂದೂ ತಿಳಿಸಿದರು.
‘ರಸ್ತೆಯಲ್ಲಿ ನಾದಿನಿಯನ್ನು ಅಡ್ಡಗಟ್ಟಿದ್ದ ಆರೋಪಿ, ಕಾರಿನಲ್ಲಿ ಅಪಹರಣ ಮಾಡಿ ಸಕಲೇಶಪುರಕ್ಕೆ ಹೋಗಿದ್ದ. ಅಲ್ಲಿಯೇ ಯುವತಿಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ‘ ಎಂದೂ ಹೇಳಿದರು.