ಬೆಂಗಳೂರು: ಬಾಣಸವಾಡಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಮೆಟ್ರೊ ಕಾರ್ಮಿಕ ಬಾಪಿ ಕುಮಾರ್ (23) ಮೃತಪಟ್ಟ ಪ್ರಕರಣ ಸಂಬಂಧ, ಕ್ಯಾಂಟರ್ ವಾಹನ ಚಾಲಕ ದೇವಪ್ರಸನ್ನ (23) ಹಾಗೂ ಮಾಲೀಕ ಮಂಜುನಾಥ್ (37) ಅವರನ್ನು ಪೊಲೀಸರು ಬಂಧಿಸಿದ್ದಾರೆ.
‘ಮೆಟ್ರೊ ಕಾಮಗಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಬಾಪಿ ಕುಮಾರ್, ನ. 11ರಂದು ರಾತ್ರಿ ರಸ್ತೆ ದಾಟುತ್ತಿದ್ದರು. ಇದೇ ಸಂದರ್ಭದಲ್ಲೇ ಕ್ಯಾಂಟರ್ ಡಿಕ್ಕಿ ಹೊಡೆದಿದ್ದರಿಂದ ಮೃತಪಟ್ಟಿದ್ದರು. ಕ್ಯಾಂಟರ್ ಸಮೇತ ಚಾಲಕ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.
‘ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಚನ್ನರಾಯಪಟ್ಟಣದ ದೊಡ್ಡಗನಿಯ ದೇವಪ್ರಸನ್ನ (23) ಹಾಗೂ ದಾಸನಪುರ ಹೋಬಳಿಯ ಮಾಕಳಿ ಪ್ರಭಾನಗರದ ಮಂಜುನಾಥ್ (37) ಎಂಬುವವರನ್ನು ಬಂಧಿಸಲಾಗಿದೆ. ಕ್ಯಾಂಟರ್ ಜಪ್ತಿ ಮಾಡಿ, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.