ಬೆಂಗಳೂರು: ನಗರದ ಎರಡು ಕಡೆಗಳಲ್ಲಿ ಬುಧವಾರ ರಾತ್ರಿ ಅಪಘಾತ ಸಂಭವಿಸಿದ್ದು, ಕೆಎಸ್ಆರ್ಟಿಸಿ ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
‘ಕ್ಯಾತ್ಸಂದ್ರ ನಿವಾಸಿ ಪ್ರದೀಪ್ (30) ಮೃತರು. ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ. ಅಪಘಾತದ ಬಗ್ಗೆ ಬ್ಯಾಟರಾಯಪುರ ಹಾಗೂ ಚಿಕ್ಕಜಾಲ ಸಂಚಾರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ಹೇಳಿದರು.
‘ಕೆಎಸ್ಆರ್ಟಿಸಿ 5ನೇ ಡಿಪೊದಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಪ್ರದೀಪ್, ಬುಧವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ಮೈಸೂರು ರಸ್ತೆಯ ಬಿಎಚ್ಇಎಲ್ ಮೊದಲ ಪ್ರವೇಶದ್ವಾರದ ಬಳಿ ರಾತ್ರಿ 11.40ರ ಸುಮಾರಿಗೆ ರಸ್ತೆ ದಾಟುತ್ತಿದ್ದರು. ಅತೀ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿತ್ತು’ ಎಂದೂ ತಿಳಿಸಿದರು.
‘ಪ್ರದೀಪ್ ಹಾಗೂ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಪ್ರದೀಪ್ ಮೃತಪಟ್ಟಿದ್ದಾರೆ. ಬೈಕ್ ಸವಾರನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದೂ ಹೇಳಿದರು.
ಪಾದಚಾರಿ ಸಾವು: ಹೆಗಡೆನಗರದ ರಸ್ತೆಯ ನಾರಾಯಣಪುರ ವೃತ್ತ ಬಳಿ ಸರಕು ಸಾಗಣೆ ವಾಹನ ಗುದ್ದಿ ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ.
‘ಸುಮಾರು 50 ವರ್ಷದ ವ್ಯಕ್ತಿ, ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಅದೇ ವೇಳೆಯೇ ವಾಹನ ಗುದ್ದಿತ್ತು. ತೀವ್ರ ಗಾಯಗೊಂಡು ವ್ಯಕ್ತಿ ಅಸುನೀಗಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಗುರುತು ಪತ್ತೆಯಾಗಿಲ್ಲ’ ಎಂದು ಪೊಲೀಸರು ಹೇಳಿದರು.