ಬೆಂಗಳೂರು: ಸುಂಕದಕಟ್ಟೆ ಬಳಿಯ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಆರೋಪಿ ನಾಗರಾಜ್, ₹ 1.50 ಲಕ್ಷ ಸಮೇತ ಪರಾರಿಯಾಗಿರುವ ಸಂಗತಿ ತನಿಖೆಯಿಂದ ಗೊತ್ತಾಗಿದೆ.
ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಏಪ್ರಿಲ್ 28ರಂದು ನಡೆದಿದ್ದ ಘಟನೆಯಲ್ಲಿ ಗಾಯಗೊಂಡಿರುವ ಯುವತಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಆರೋಪಿ ನಾಗರಾಜ್, ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದಾನೆ. ಆತನ ಬಂಧನಕ್ಕೆ ವಿಶೇಷ ತಂಡಗಳು ತನಿಖೆ ಮುಂದುವರಿಸಿವೆ. ಆರೋಪಿಯ ಪೋಷಕರು, ಸ್ನೇಹಿತರು, ವ್ಯಾಪಾರದ ಪಾಲುದಾರರು ಹಾಗೂ ಇತರಿಂದಲೂ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
‘ಆ್ಯಸಿಡ್ ದಾಳಿಗೂ ಮುನ್ನ ಆರೋಪಿ ವ್ಯವಸ್ಥಿತ ಸಂಚು ರೂಪಿಸಿದ್ದ. ದಾಳಿ ಬಳಿಕ ಪೊಲೀಸರು ತನ್ನನ್ನು ಬಂಧಿಸಬಹುದೆಂದು ತಿಳಿದು, ಪರಾರಿಯಾಗಲು ಮೊದಲೇ ಯೋಚಿಸಿದ್ದ. ಅದಕ್ಕಾಗಿ ₹ 1.50 ಲಕ್ಷ ನಗದು ಸಿದ್ಧಪಡಿಸಿಕೊಂಡಿದ್ದ. ಕೃತ್ಯದ ನಂತರ ಅದೇ ನಗದು ಸಮೇತ ಆರೋಪಿ ಪರಾರಿಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿ ಮೊಬೈಲ್ ಬಳಸುತ್ತಿಲ್ಲ. ಹೀಗಾಗಿ, ಆತನ ವಿಳಾಸದ ಬಗ್ಗೆ ತಾಂತ್ರಿಕ ಸುಳಿವುಗಳು ಸಿಗುತ್ತಿಲ್ಲ. ಆದರೆ, ಆತ ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಸುತ್ತಾಡುತ್ತಿರುವ ಮಾಹಿತಿ ಇದೆ. ಎರಡೂ ರಾಜ್ಯಕ್ಕೂ ತಂಡಗಳು ಹೋಗಿವೆ’ ಎಂದೂ ಮೂಲಗಳು ತಿಳಿಸಿವೆ.
ಎಎಪಿ ಕಾರ್ಯಕರ್ತರ ಪ್ರತಿಭಟನೆ: ‘ಆ್ಯಸಿಡ್ ದಾಳಿ ಪ್ರಕರಣದ ಆರೋಪಿಯನ್ನು ತ್ವರಿತವಾಗಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಮಹಿಳಾ ಘಟಕದ ಕಾರ್ಯಕರ್ತೆಯರು ಕಾಮಾಕ್ಷಿಪಾಳ್ಯ ಠಾಣೆ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.