ಬೆಂಗಳೂರು: ಅಡಿಗಾಸ್ ಯಾತ್ರಾ ಪ್ರವಾಸ ಸಂಸ್ಥೆಯ ರಜತ ಮಹೋತ್ಸವ ಬಸವನಗುಡಿಯಲ್ಲಿ ನಡೆಯಿತು.
ರಜತ ಮಹೋತ್ಸವ ಕೈಪಿಡಿ ಬಿಡುಗಡೆ ಮಾಡಿದ ಬಸವನಗುಡಿ ಠಾಣೆಯ ಸಬ್ ಇನ್ಸ್ಪೆಕ್ಟರ್ ರೇಷ್ಮಾ ಮಾತನಾಡಿ, ‘ಪ್ರವಾಸಗಳು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ.ದೇಶ ಸುತ್ತು, ಕೋಶ ಓದು ಎಂಬ ನಾಣ್ನುಡಿಯಂತೆ ಪ್ರವಾಸಗಳಿಂದ ಬೇರೆ ಬೇರೆ ಪ್ರದೇಶಗಳ ಬಗ್ಗೆ ತಿಳಿವಳಿಕೆ ಮೂಡುತ್ತದೆ’ ಎಂದರು.
ಭೂವಿಜ್ಞಾನ ಸಂಸ್ಥೆಯ ಮಾಜಿ ಅಧಿಕಾರಿ, ಲೇಖಕ ಇ.ಡಿ. ನರಹರಿ ಮಾತನಾಡಿ, ‘ಭಾರತ ವೈವಿಧ್ಯಮಯ ಭೂಮಿ. ಇಲ್ಲಿನ ಭೂಭಾಗಗಳು ಅಪರಿಮಿತ ಸೋಜಿಗದಿಂದ ಕೂಡಿವೆ. ಅಡಿಗಾಸ್ ಯಾತ್ರಾ ಉತ್ತಮ ಪ್ರವಾಸಗಳನ್ನು ಆಯೋಜಿಸುವುದರ ಮೂಲಕ ಪ್ರವಾಸೋದ್ಯಮಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ’ ಎಂದರು.
ಪ್ರವಾಸದ ಅನುಭವ ತೆರೆದಿಟ್ಟಸೂರ್ಯನಾರಾಯಣ ರಾವ್, ‘ಪ್ರತಿಕೂಲ ಹವಾಮಾನ, ಅಪರಿಚಿತ ತಾಣಗಳಲ್ಲಿ ಸಂಸ್ಥೆಯ ಸಿಬ್ಬಂದಿ ಪ್ರವಾಸಿಗರ ಬಗ್ಗೆ ವಹಿಸುವ ಕಾಳಜಿ ಸ್ತುತ್ಯರ್ಹ. ಸಂಸ್ಥೆಯ ಸೇವೆಗಳು ಗುಣಮಟ್ಟದಿಂದ ಕೂಡಿವೆ. ಇಂತಹ ನಂಬಿಕಸ್ಥ, ಪ್ರಾಮಾಣಿಕ ಸಂಸ್ಥೆ ಸುವರ್ಣ ಮಹೋತ್ಸವ ಆಚರಿಸುವಂತಾಗಲಿ’ ಎಂದು ಹಾರೈಸಿದರು.
ಸಂಸ್ಥೆಯ ಸ್ಥಾಪಕ ಕೆ. ನಾಗರಾಜ ಅಡಿಗ, ‘ಕಡಿಮೆ ದಿನಗಳಲ್ಲಿ ದೂರದ ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಗಳಿಗೆ ವಿಶೇಷ ಪ್ರವಾಸದ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.
ಅಮರನಾಥ, ಕೇದಾರನಾಥ ಹಾಗೂ ಕೈಲಾಸ ಮಾನಸ ಸರೋವರಕ್ಕೆ ಹೆಲಿಕಾಪ್ಟರ್ ಮೂಲಕ ಯಾತ್ರೆಯನ್ನು ಆಯೋಜಿಸಿ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಮಾಲ್ಡೀವ್ಸ್, ಶ್ರೀಲಂಕಾ, ಥಾಯ್ಲೆಂಡ್, ಸಿಂಗಪುರ, ಮಲೇಷ್ಯಾ, ನೇಪಾಳ, ಭೂತಾನ್, ಹಾಂಕಾಂಗ್, ಮಕಾವ್, ಇಂಡೋನೇಷ್ಯಾ ಪ್ರವಾಸಗಳನ್ನು ರೂಪಿಸಲಾಗಿದೆ' ಎಂದು ತಿಳಿಸಿದರು.
‘ರಜತ ಮಹೋತ್ಸವದ ಪ್ರಯುಕ್ತ ಕೈಲಾಸ ಮಾನಸ ಸರೋವರ ಯಾತ್ರಿಕರಿಗೆ ಈ ಬಾರಿ ವಿಶೇಷವಾಗಿ ₹20 ಸಾವಿರ ರಿಯಾಯಿತಿ ಇದೆ’ ಎಂದು ಹೇಳಿದರು.