ಬೆಂಗಳೂರು: ಅರಮನೆ ಮೈದಾನದಲ್ಲಿ ಗುರುವಾರ ಆರಂಭವಾದ ಭಾರತದ ಅತಿದೊಡ್ಡ ಅಗರಬತ್ತಿ ಮೇಳ ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ನವೋದ್ಯಮಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಇದುವರೆಗೂ ಸಾಂಪ್ರದಾಯಿಕ ತಯಾರಿಕೆಗೆ ಹೆಸರಾಗಿದ್ದ ಅಗರಬತ್ತಿ ಉದ್ಯಮ, ಆಧುನಿಕ ತಂತ್ರಜ್ಞಾ ನಕ್ಕೆ ತೆರೆದುಕೊಳ್ಳುತ್ತಾ ಹೊಸರೂಪ ಪಡೆಯುತ್ತಿದೆ. ಮನೆಗಳಲ್ಲಿ ಗೃಹಿಣಿಯರು ಕೆಲಸದ ಬಿಡುವಿನ ಮಧ್ಯೆ ಕೈಯಿಂದ ತಯಾರಿಸುತ್ತಿದ್ದ ಅಗರಬತ್ತಿಗಳು, ಈಗ ಯಂತ್ರಗಳ ಸದ್ದಿನೊಂದಿಗೆ ಸಿದ್ಧವಾಗುತ್ತಿವೆ. ಅರೆಕಾಲಿಕ ಕೆಲಸ ಮಾಡುತ್ತಿದ್ದ ಮಹಿಳೆಯರು ಪೂರ್ಣ ಪ್ರಮಾಣದ ಉದ್ಯೋಗಿಗಳಾಗಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಉದ್ಯಮವನ್ನು ವಿಸ್ತಾರಗೊಳಿಸುವ, ಹೊಸ ಉದ್ಯಮಿಗಳನ್ನು ಸೆಳೆಯುವ, ಸಾಂಪ್ರದಾಯಿಕ ಅಗರಬತ್ತಿ ತಯಾರಕ ರನ್ನು ಆಧುನಿಕತೆಯತ್ತ ತಿರುಗಿಸುವ, ಉದ್ಯೋಗದ ಅವಕಾಶಗಳನ್ನು ಹೆಚ್ಚಿ ಸುವ ಸಂಕಲ್ಪದೊಂದಿಗೆ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಘಎರಡು ದಶಕಗಳ ನಂತರ ಇಂತಹ ಮೇಳ ಆಯೋಜಿಸಿದೆ.
ಅಗರಬತ್ತಿ ತಯಾರಿಕೆಯ ವೈವಿ ಧ್ಯಮಯ ಯಂತ್ರಗಳು, ಬಳಸುವ ಸಾಮಗ್ರಿಗಳು, ಅಗರಬತ್ತಿಗೆ ಲೇಪಿ ಸುವ ಭಾರತೀಯರ ಅಪೇಕ್ಷೆಯ ತರಹೇವಾರಿ ಸುಗಂಧ ದ್ರವ್ಯಗಳು, ಆಕರ್ಷಕ ಪ್ಯಾಕಿಂಗ್ ಸೌಲಭ್ಯಗಳು, ಚಿಲ್ಲರೆ ಮಾರಾಟದ ಅವಕಾಶಗಳನ್ನು ಮೇಳದಲ್ಲಿ ಅನಾವರಣಗೊಳಿಸಲಾಗಿದೆ.
200ಕ್ಕೂ ಹೆಚ್ಚು ತಯಾರಕರು, ಪೂರೈಕೆದಾರರು, ಚಿಲ್ಲರೆ ವ್ಯಾಪಾರಿಗಳು ಮೇಳದಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಿದರು. ಪರಸ್ಪರ ಕಲೆತು ಚರ್ಚಿಸಿದರು. ಉದ್ಯಮ ಆರಂಭಿಸುವ ಕನಸು ಹೊತ್ತು ಬಂದ ಹೊಸ ಉದ್ಯಮಿಗಳಿಗೆ ಬೆಳಕಿನ ದಾರಿ ತೋರಿದರು.
‘ಮೊದಲು ಪೂಜಾ ವಿಧಿವಿಧಾನ ಗಳಿಗೆ ಸೀಮಿತವಾಗಿದ್ದ ಅಗರಗತ್ತಿ ಇಂದು ಜನರ ಜೀವನ ಶೈಲಿಯ ಒಂದು ಭಾಗವಾಗಿದೆ. ದೇಶದಲ್ಲಿ ಐದು ಲಕ್ಷ ಜನರು ಕೆಲಸ ಮಾಡುತ್ತಿದ್ದಾರೆ. ದೇಶದ ಉತ್ಪಾದನೆಯಲ್ಲಿ ಶೇ 60ರಷ್ಟು ಕರ್ನಾಟಕದ ಕೊಡುಗೆ ಇದೆ. ರಾಜ್ಯ 3 ಲಕ್ಷ ಮಹಿಳೆಯರಿಗೆ ಉದ್ಯೋಗ ನೀಡಿದೆ. ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೂ ಆದ್ಯತೆ ನೀಡಲಾಗಿದೆ. ಅವರಿಗೆ ತರಬೇತಿ ನೀಡಲಾಗುತ್ತಿದೆ. ಸ್ವಸಹಾಯ ಗುಂಪುಗಳು ಯಂತ್ರಗಳನ್ನು ಖರೀದಿ ಮಾಡುತ್ತಿವೆ. ಒಬ್ಬ ಮಹಿಳೆ ದಿನಕ್ಕೆ ಕನಿಷ್ಠ ₹ 500 ದುಡಿಯುತ್ತಿದ್ದಾರೆ’ ಎಂದು ಎಐಎಎಂಎ ಅಧ್ಯಕ್ಷ ಅರ್ಜುನ್ ರಂಗಾ ವಿವರ ನೀಡಿದರು.