ಬೆಂಗಳೂರು: ಅಮೆರಿಕದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ₹ 10 ಲಕ್ಷ ಪಡೆದು ವಂಚಿಸಿರುವ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹಣ ಕಳೆದುಕೊಂಡಿರುವ ಗಿರಿಬಾಬು ಎಂಬುವರು ದೂರು ನೀಡಿದ್ದಾರೆ. ಆರೋಪಿ ಮುರಳಿ ಕೃಷ್ಣರೆಡ್ಡಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದರು.
‘ಕಟ್ಟಡ ನಿರ್ಮಾಣ ಮೇಲ್ವಿಚಾರಕ ಆಗಿರುವ ಗಿರಿಬಾಬು ಅವರಿಗೆ 2018ರಲ್ಲಿ ಆರೋಪಿ ಪರಿಚಯವಾಗಿತ್ತು. ಅಮೆರಿಕದಲ್ಲಿ ಸಂಬಂಧಿಕರು ಇರುವುದಾಗಿ ಹೇಳಿದ್ದ ಆರೋಪಿ, ಅವರ ಮೂಲಕ ಕೆಲಸ ಕೊಡಿಸುವುದಾಗಿ ತಿಳಿಸಿದ್ದರು. ಪಾಸ್ಪೋರ್ಟ್, ವೀಸಾ ಖರ್ಚು ಹಾಗೂ ಕಮಿಷನ್ ಎಂದು ಹೇಳಿ ₹ 10 ಲಕ್ಷ ಪಡೆದುಕೊಂಡಿದ್ದರು.’
‘ಇದುವರೆಗೂ ಆರೋಪಿ ಕೆಲಸ ಕೊಡಿಸಿಲ್ಲ. ಹಣ ವಾಪಸು ಕೇಳಿದರೆ ಜೀವ ಬೆದರಿಕೆ ಹಾಕುತ್ತಿರುವುದಾಗಿ ಗಿರಿಬಾಬು ದೂರಿನಲ್ಲಿ ಆರೋಪಿಸಿದ್ದಾರೆ’ ಎಂದೂ ಪೊಲೀಸರು ಹೇಳಿದರು.