ಬೆಂಗಳೂರು: ಯಲಹಂಕ ವಲಯದ ಬ್ಯಾಟರಾಯನಪುರ ವಾರ್ಡ್ನ ಅಮೃತಹಳ್ಳಿ ಕೆರೆ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ಮಂಗಳವಾರ ತೆರವುಗೊಳಿಸಿದರು.
ಯಲಹಂಕ ತಾಲ್ಲೂಕಿನ ಜಕ್ಕೂರು ಹೋಬಳಿ ಸರ್ವೇ ನಂಬರ್ 115ರಲ್ಲಿ ಒಟ್ಟು 24 ಎಕರೆ 36 ಗುಂಟೆ ವಿಸ್ತೀರ್ಣದಲ್ಲಿ ಈ ಕೆರೆ ಇದೆ. ಇದಕ್ಕೆ ಸಂಬಂಧಿಸಿದೆ 20 ಗುಂಟೆ ಜಮೀನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಶೆಡ್ ಹಾಗೂ ಶೌಚಾಲಯ ನಿರ್ಮಿಸಿದ್ದರು. ಭೂದಾಖಲೆಗಳ ಸಹಾಯಕ ನಿರ್ದೇಶಕರ ಆದೇಶದಂತೆ ಆ.6ರಂದು ಸರ್ವೇಯರ್ಗಳು ಕೆರೆಯ ಪಕ್ಕದ ಸರ್ವೇ ನಂಬರ್ಗಳ ಆಧಾರದ ಮೇಲೆ ಅಳತೆ ಮಾಡಿ ಗಡಿಗಳನ್ನು ಗುರುತಿಸಿದ್ದರು.
ಬಿಬಿಎಂಪಿ ಕೆರೆಗಳ ವಿಭಾಗದ ವಿಶೇಷ ಆಯುಕ್ತ ರೆಡ್ಡಿ ಶಂಕರ ಬಾಬು ಅವರ ನೇತೃತ್ವದಲ್ಲಿ ಯಲಹಂಕ ವಲಯ ಜಂಟಿ ಆಯುಕ್ತ ಡಾ.ಅಶೋಕ್, ಕೆರೆಗಳ ವಿಭಾಗದ ಸೂಪರಿಂಟೆಂಡಿಂಗ್ ಎಂಜಿನಿಯರ್ ಬಿ.ಟಿ. ಮೋಹನ್ ಕೃಷ್ಣ, ತಹಸೀಲ್ದಾರರು ಹಾಗೂ ಇತರ ಅಧಿಕಾರಿಗಳ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.
‘ಒತ್ತುವರಿ ತೆರವುಗೊಳಿಸಿದ ಸ್ಥಳದಲ್ಲಿ ತಂತಿಬೇಲಿ ಹಾಗೂ ಕಂಬಗಳನ್ನು ಅಳವಡಿಸಲಾಗಿದೆ’ ಎಂದು ಕೆರೆಗಳ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಾಶ್.ಕೆ.ವಿ ಮಾಹಿತಿ ನೀಡಿದರು.
ಅಮೃತಹಳ್ಳಿ ಕೆರೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧೀನದಲ್ಲಿತ್ತು. ಮೂರು ವರ್ಷಗಳ ಹಿಂದೆ ಬಿಡಿಎಯು ಈ ಕೆರೆಯನ್ನು ಪಾಲಿಕೆಗೆ ಹಸ್ತಾಂತರಿಸಿತ್ತು.