ಬೆಂಗಳೂರು: ‘ನಂದಿನಿ ಪಾರ್ಲರ್ಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸುವುದರ ಜತೆಗೆಅಪಾರ್ಟ್ಮೆಂಟ್ಗಳಿಗೆ ಅವುಗಳನ್ನು ನೇರವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಬ್ಯಾಟರಾಯನಪುರ, ದಾಸನಪುರ ಕೃಷಿ ಮಾರುಕಟ್ಟೆಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ, ಆಹಾರ ಸಚಿವ ಕೆ. ಗೋಪಾಲಯ್ಯ ಮತ್ತು ತೋಟಗಾರಿಕಾ ಸಚಿವ ನಾರಾಯಣಗೌಡ ಜತೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮೇಯರ್ ಕಚೇರಿಯಲ್ಲಿ ಸಭೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಂದಿನಿ ಪಾರ್ಲರ್ಗಳಲ್ಲಿ ತರಕಾರಿ ಮತ್ತು ಹಣ್ಣು ಮಾರಾಟ ಸಂಬಂಧ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಚರ್ಚಿಸಲಾಗಿದೆ. ಅನುಮತಿ ನೀಡುವುದಾಗಿ ಅವರು ತಿಳಿಸಿದ್ದಾರೆ’ ಎಂದರು.
ಅಪಾರ್ಟ್ಮೆಂಟ್ಗಳಿಗೆ ನೇರವಾಗಿ ಹಣ್ಣು ಮತ್ತು ತರಕಾರಿಯನ್ನು ಹಾಪ್ಕಾಮ್ಸ್ ಮೂಲಕ ತಲುಪಿಸಬೇಕಿದೆ. ಈ ಸಂಬಂಧ ಮೇಯರ್ ಮತ್ತು ಪಾಲಿಕೆಯ ಎಲ್ಲಾ ಸದಸ್ಯರ ಸಹಕಾರ ಕೇಳಲಾಗಿದೆ. ಮೇಯರ್ ಅವರು ಶನಿವಾರ ಹಾಪ್ಕಾಮ್ಸ್ ಮತ್ತು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಜತೆ ವಿಡಿಯೊ ಸಂವಾದ ನಡೆಸಲಿದ್ದಾರೆ ಎಂದು ಹೇಳಿದರು.
ರೈತರು ಮತ್ತು ಗ್ರಾಹಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಬಿ.ಸಿ. ಪಾಟೀಲ ಮತ್ತು ನಾರಾಯಣಗೌಡ ಹೇಳಿದರು.
ಹಣ್ಣು, ತರಕಾರಿ ಪೂರೈಕೆಗೆ ಹಾಪ್ಕಾಮ್ಸ್
ಬೆಂಗಳೂರು: ‘ರಾಜ್ಯದಲ್ಲಿರುವ 450 ಹಾಪ್ಕಾಮ್ಸ್ ಮೂಲಕ ಪ್ರತಿದಿನ 400 ರಿಂದ 450 ಟನ್ಗಳಷ್ಟು ಹಣ್ಣು ಮತ್ತು ತರಕಾರಿ ಸರಬರಾಜಾಗುತ್ತಿದೆ‘ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
‘ಬೆಂಗಳೂರಿನಲ್ಲಿ 220 ಮಳಿಗೆಗಳು ಮತ್ತು 40 ಮೊಬೈಲ್ ಘಟಕಗಳ ಮೂಲಕ ಪ್ರತಿದಿನ 120 ಟನ್ ಹಣ್ಣು, ತರಕಾರಿ ಮಾರಾಟ ಮಾಡಲಾಗುತ್ತಿದೆ’ ಎಂದು ಶುಕ್ರವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.
‘ಶಿವಮೊಗ್ಗದಲ್ಲಿ 28 ಟನ್, ಬೆಳಗಾವಿಯಲ್ಲಿ 40 ಟನ್ ವ್ಯಾಪಾರವಾಗಿದೆ’ ಎಂದರು.
ಶುದ್ಧ ನೀರು ಉಚಿತ
198 ವಾರ್ಡ್ಗಳಲ್ಲೂ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ₹5ಕ್ಕೆ ಸಿಗುತ್ತಿದ್ದ 20 ಲೀಟರ್ ನೀರನ್ನು ಇದೇ 21ರಿಂದ ಉಚಿತವಾಗಿ ನೀಡಲು ಚಿಂತಿಸಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.
ಈ ಪ್ರಸ್ತಾವನೆಗೆ ಮೇಯರ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.