ಬೆಂಗಳೂರು: ಮಾಜಿ ಸಂಸದ ಮಂಜುನಾಥ್ ಕುನ್ನೂರ ಅವರ ಮಗ ಚಂದ್ರಶೇಖರ್ ಹಾಗೂ ಸ್ನೇಹಿತನ ಮೇಲೆ ಹಲ್ಲೆ ನಡೆದಿದ್ದು, ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜ. 23ರಂದು ರಾತ್ರಿ ನಡೆದಿರುವ ಘಟನೆ ಬಗ್ಗೆ ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಆರೋಪಿಗಳು ಎನ್ನಲಾದ ಚೇತನ್ ಹಾಗೂ ಪ್ರಶಾಂತ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಉದ್ಯಮಿಯೂ ಆಗಿರುವ ಚಂದ್ರಶೇಖರ್, ಸ್ನೇಹಿತನ ಜೊತೆ ಊಟಕ್ಕೆಂದು ಹೋಟೆಲೊಂದಕ್ಕೆ ಹೋಗಿದ್ದರು. ಊಟದ ಟೇಬಲ್ ಬಳಿ ಕುಳಿತು ಮಾತನಾಡುತ್ತಿದ್ದರು. ಪಕ್ಕದ ಟೇಬಲ್ನಲ್ಲಿ ಕುಳಿತಿದ್ದ ಆರೋಪಿಗಳು, ಊಟ ಮಾಡದಂತೆ ಎಚ್ಚರಿಕೆ ನೀಡಿ ಜಗಳ ತೆಗೆದಿದ್ದರು.’
‘ಚಂದ್ರಶೇಖರ್ ಹಾಗೂ ಸ್ನೇಹಿತನನ್ನು ಸಮೀಪದಲ್ಲೇ ಇದ್ದ ಮತ್ತೊಂದು ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಆರೋಪಿಗಳು ಎಳೆದೊಯ್ದಿದ್ದರು. ಅಲ್ಲಿಯೇ ಚಂದ್ರಶೇಖರ್ ಕಪಾಳಕ್ಕೆ ಹೊಡೆದು, ಹಲ್ಲೆ ಮಾಡಿ ಅಕ್ರಮ ಬಂಧನದಲ್ಲಿಟ್ಟಿದ್ದರು. ಅಲ್ಲಿಂದ ತಪ್ಪಿಸಿಕೊಂಡು ಬಂದು ಚಂದ್ರಶೇಖರ್ ದೂರು ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.
‘ಕರ್ಫ್ಯೂ ಜಾರಿಯಲ್ಲಿದ್ದರೂ ವಹಿವಾಟು ನಡೆಸುತ್ತಿದ್ದ ಆರೋಪದಡಿ ಬಾರ್ ಆ್ಯಂಡ್ ರೆಸ್ಟೋರೆಂಟ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಲ್ಲೆ ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹಲ್ಲೆಗೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದೂ ಮೂಲಗಳು ಹೇಳಿವೆ.