ಬೆಂಗಳೂರು: ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ನಿಂದ ಕತ್ತರಿಸಿ ಹಣ ಕದ್ದೊಯ್ಯುತ್ತಿದ್ದ ಆರೋಪದಡಿ ಇಬ್ಬರನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
‘ಉತ್ತರ ಭಾರತದ ರಾಜ್ಕುಮಾರ್ ಹಾಗೂ ಮರ್ಜಿತ್ ಸಿಂಗ್ ಬಂಧಿತರು. ನಗರದ ಎರಡು ಎಟಿಎಂ ಯಂತ್ರಗಳಲ್ಲಿದ್ದ ಹಣವನ್ನು ಆರೋಪಿಗಳು ಕದ್ದಿದ್ದರು. ಪ್ರಕರಣದ ತನಿಖೆ ಕೈಗೊಂಡು, ಇವರಿಬ್ಬರನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು’ ಎಂದೂ ತಿಳಿಸಿವೆ.
‘ತಿಂಗಳಿಗೊಮ್ಮೆ ನಗರಕ್ಕೆ ಬರುತ್ತಿದ್ದ ಆರೋಪಿಗಳು, ಇಲ್ಲಿಯ ವಸತಿಗೃಹಗಳಲ್ಲಿ ವಾಸವಿರುತ್ತಿದ್ದರು. ಭದ್ರತಾ ಸಿಬ್ಬಂದಿ ಇರದ ಹಾಗೂ ಜನರ ಓಡಾಟ ಕಡಿಮೆ ಇರುವ ಎಟಿಎಂ ಘಟಕವನ್ನು ಗುರುತಿಸಿ ಕೃತ್ಯ ಎಸಗುತ್ತಿದ್ದರು.’
‘ಎಟಿಎಂ ಯಂತ್ರವನ್ನು ಗ್ಯಾಸ್ ಕಟರ್ನಿಂದ ಕತ್ತರಿಸುತ್ತಿದ್ದ ಆರೋಪಿಗಳು, ಅದರಲ್ಲಿದ್ದ ಹಣವನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದರು. ಇತ್ತೀಚೆಗೆ ಉತ್ತರಹಳ್ಳಿ ಬಳಿಯ ಬ್ಯಾಂಕೊಂದರ ಎಟಿಎಂ ಯಂತ್ರದಿಂದ ₹ 17 ಲಕ್ಷವನ್ನು ಆರೋಪಿಗಳು ಕದ್ದಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಮೂಲಗಳು ಹೇಳಿವೆ.