ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ವೃದ್ಧರ ವಿರುದ್ಧದ ಅಪರಾಧ ತೀವ್ರ ಏರಿಕೆ!

ಬೆಂಗಳೂರಿನಲ್ಲಿ ‘ಹಿರಿಯ ಜೀವ’ಗಳ ಸುರಕ್ಷತೆಗೆ ಬೇಕಿದೆ ಬಲ| ಆಸ್ತಿ, ಚಿನ್ನಾಭರಣಕ್ಕಾಗಿ ವೃದ್ಧರ ಹತ್ಯೆ * ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೆಪ
Last Updated 4 ಸೆಪ್ಟೆಂಬರ್ 2021, 2:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಸಿಸುತ್ತಿರುವ ಹಿರಿಯ ನಾಗರಿಕರು (60+ ವಯಸ್ಸು) ಹಾಗೂ ಒಂಟಿ ಮಹಿಳೆಯರ ಮೇಲೆ ಅಪರಾಧ ಕೃತ್ಯ ಎಸಗುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಆಸ್ತಿ, ನಗದು ಹಾಗೂ ಚಿನ್ನಾಭರಣ ದೋಚಲು ವೃದ್ಧ ದಂಪತಿ ಹತ್ಯೆ ಘಟನೆಗಳು ನಡೆಯುತ್ತಿವೆ. ವೃದ್ಧಾಶ್ರಮದಲ್ಲೂ ಆಹಾರ ನೀಡದೇ ವೃದ್ಧರನ್ನು ಕೊಲೆ ಮಾಡಿದ ಪ್ರಕರಣಗಳೂ ವರದಿಯಾಗಿವೆ.

ಕುಟುಂಬದ ಸದಸ್ಯರಿಂದ ಹಾಗೂ ಕೆಲ ಸಾರ್ವಜನಿಕರಿಂದಲೂ ವೃದ್ಧರ ಮೇಲೆ ದೌರ್ಜನ್ಯಗಳು ಮೇಲಿಂದ ಮೇಲೆ ನಡೆಯುತ್ತಿವೆ. ಕೆಲ ವೃದ್ಧರು, ಠಾಣೆಗೆ ಹೋಗಿ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂಬ ಆರೋಪ ವ್ಯಕ್ತವಾಗಿದೆ.

‘ವಯಸ್ಸಿನಲ್ಲಿ ದುಡಿದು, ಈಗ ವೃದ್ಧಾಪ್ಯ ಬದುಕು ನಡೆಸುತ್ತಿದ್ದೇವೆ. ಕೆಲವರು ಮನೆಯಲ್ಲಿ ಒಂಟಿಯಾಗಿ ಇರಬೇಕಾದ ಸ್ಥಿತಿ ಇದೆ. ಇಂಥ ಹಿರಿಯ ನಾಗರಿಕರಿಗೆ ರಕ್ಷಣೆ ನೀಡುವುದು ಪೊಲೀಸ್ ಇಲಾಖೆ ಜವಾಬ್ದಾರಿ. ಅನಕ್ಷರಸ್ಥ ಹಿರಿಯ ನಾಗರಿಕರಿಗೆ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹಿರಿಯ ನಾಗರಿಕ ಕಾಚರಕನಹಳ್ಳಿಯ ಜಗನ್ನಾಥ್‌ ರೆಡ್ಡಿ ಹೇಳಿದರು.

ಇನ್ನೊಬ್ಬ ಹಿರಿಯ ನಾಗರಿಕ ಬಿ.ಶ್ರೀಪತಿ ರಾವ್, ‘ವೃದ್ಧ ದಂಪತಿ ಕೊಲೆ, ಸುಲಿಗೆ, ಹಲ್ಲೆಯಂಥ ಘಟನೆಗಳು ನಿತ್ಯವೂ ವರದಿಯಾಗುತ್ತಿವೆ. ಬಸ್ಸಿನಲ್ಲೂ ಹಿರಿಯ ನಾಗರಿಕರ ಗಮನ ಬೇರೆಡೆ ಸೆಳೆದು ಹಣ, ಚಿನ್ನಾಭರಣ, ಮೊಬೈಲ್ ಕದಿಯುತ್ತಿದ್ದಾರೆ. ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿದೆ. ಹಿರಿಯ ಜೀವಗಳ ಸುರಕ್ಷತೆಗೆ ವ್ಯವಸ್ಥೆಯೊಂದನ್ನು ರೂಪಿಸಬೇಕಾದ ಅಗತ್ಯವಿದೆ’ ಎಂದರು.

‘ಮನೆಯಿಂದಲೇ ಹಿರಿಯ ನಾಗರಿಕರು ದೂರು ನೀಡಲು ವ್ಯವಸ್ಥೆ ಇರಬೇಕು. ದೂರುದಾರರಿಗೆ ರಕ್ಷಣೆ ನೀಡಬೇಕು. ಅವರ ಮಾಹಿತಿ ಆರೋಪಿಗಳಿಗೆ ಸಿಗದಂತೆ ಗೋಪ್ಯವಾಗಿರಿಸಬೇಕು. ನಿತ್ಯವೂ ರಸ್ತೆಯಲ್ಲಿ ಸಂಚರಿಸುವ ಬಸ್‌, ಆಟೊ, ಕ್ಯಾಬ್‌ ಚಾಲಕರು ಹಾಗೂ ಬೀದಿಬದಿ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹಿರಿಯ ನಾಗರಿಕರ ಮೇಲೆ ದೌರ್ಜನ್ಯಗಳಾದರೆ, ತ್ವರಿತವಾಗಿ ಠಾಣೆಗೆ ಮಾಹಿತಿ ನೀಡುವಂತೆ ಅವರನ್ನು ಕೋರಬೇಕು’ ಎಂದೂ ಹೇಳಿದರು.

**

–ಕಮಲ್ ಪಂತ್
–ಕಮಲ್ ಪಂತ್

ಠಾಣೆವಾರು ನೋಂದಣಿ ಆರಂಭ: ಕಮಿಷನರ್ ಕಮಲ್ ಪಂತ್
‘ಹಿರಿಯ ನಾಗರಿಕರು ಹಾಗೂ ಒಂಟಿ ಮಹಿಳೆಯರ ರಕ್ಷಣೆ ಪೊಲೀಸರ ಜವಾಬ್ದಾರಿ. ಅಂಥವರ ಮಾಹಿತಿಯನ್ನು ಕಲೆಹಾಕಲು ತೀರ್ಮಾನಿಸಲಾಗಿದೆ. ಕೆಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದರು.

‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಕಮಲ್ ಪಂತ್, ‘ಸೆಪ್ಟೆಂಬರ್ 15ರೊಳಗಾಗಿ ಎಲ್ಲ ಠಾಣೆಯಲ್ಲೂ ನೋಂದಣಿ ಕೆಲಸ ಚುರುಕಾಗಲಿದೆ’ ಎಂದರು.

ಸಂದರ್ಶನದ ವಿವರ ಇಲ್ಲಿದೆ.

* ಹಿರಿಯ ನಾಗರಿಕರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರ ತಡೆಗೆ ಪೊಲೀಸರು ಕೈಗೊಂಡ ಕ್ರಮಗಳೇನು?

ಕಮಲ್ ಪಂತ್: ಹಿರಿಯ ನಾಗರಿಕರ ಮೇಲಿನ ದೌರ್ಜನ್ಯವನ್ನು ಸಹಿಸುವುದಿಲ್ಲ. ನಗರದಲ್ಲಿ ವಾಸವಿರುವ ಹಿರಿಯ ನಾಗರಿಕರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಯಾ ಠಾಣೆ ಪೊಲೀಸರು, ಹಿರಿಯ ನಾಗರಿಕರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಸಮಸ್ಯೆಗಳನ್ನು ಆಲಿಸಲಿದ್ದಾರೆ

* ಹಿರಿಯ ನಾಗರಿಕರ ನೋಂದಣಿ ಹೇಗೆ? ಇದರ ಉಪಯೋಗವೇನು?

ಕಮಲ್ ಪಂತ್; ಮನೆ ಹಾಗೂ ಸುತ್ತಮುತ್ತಲ ಸ್ಥಳದಲ್ಲಿ ಸುರಕ್ಷತೆ ಇಲ್ಲವೆಂದು ಭಾವಿಸುವ ಹಿರಿಯ ನಾಗರಿಕರು ತಮ್ಮ ವ್ಯಾಪ್ತಿಯ ಠಾಣೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಖುದ್ದಾಗಿ ಠಾಣೆಗೆ ಬರಲು ಸಾಧ್ಯವಾಗದವರು, ಬೆಂಗಳೂರು ಸಿಟಿ ಪೊಲೀಸ್ ಜಾಲತಾಣದಲ್ಲಿ ಆನ್‌ಲೈನ್ ಮೂಲಕವೂ ಹೆಸರು ನೋಂದಾಯಿಸಿಕೊಳ್ಳಬಹುದು. ಈ ಆನ್‌ಲೈನ್ ನೋಂದಣಿ ಸೌಲಭ್ಯ ಸದ್ಯದಲ್ಲೇ ಲಭ್ಯವಾಗಲಿದೆ.

ನೋಂದಾಯಿತ ಹಿರಿಯ ನಾಗರಿಕರು ಹಾಗೂ ಒಂಟಿ ಮಹಿಳೆಯರ ಮನೆಗಳ ಸ್ಥಳಗಳನ್ನು ‘ಇ–ಬೀಟ್’ ಜಿಪಿಎಸ್ ವ್ಯವಸ್ಥೆಯಲ್ಲಿ ಗುರುತಿಸಲಾಗುವುದು. ಗಸ್ತು ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಕನಿಷ್ಠ 10 ನಿಮಿಷ ನೋಂದಾಯಿತರ ಜೊತೆ ಮಾತುಕತೆ ನಡೆಸಲಿದ್ದಾರೆ. ಸಿಬ್ಬಂದಿ ಹೋಗಿಬಂದ ದಾಖಲೆ ಸರ್ವರ್‌ನಲ್ಲಿ ನಮಗೆ ಲಭ್ಯವಾಗಲಿದೆ. ಆಗಾಗ ಪೊಲೀಸರು ಮನೆಗೆ ಹೋಗಿ ಬಂದರೆ, ನೋಂದಾಯಿತರಿಗೆ ಧೈರ್ಯ ಬರುತ್ತದೆ.

* ವೈಯಕ್ತಿಕವಾಗಿ ಹಿರಿಯ ನಾಗರಿಕರ ಸಮಸ್ಯೆ ಆಲಿಸುತ್ತೀರಾ?

ಕಮಲ್ ಪಂತ್: ಜನರ ಸಮಸ್ಯೆ ಆಲಿಸಲು ನಾನು ನಡೆಸುತ್ತಿರುವ ಜನಸಂಪರ್ಕ ಸಭೆಯಲ್ಲಿ ಹಿರಿಯ ನಾಗರಿಕರೇ ಹೆಚ್ಚಿರುತ್ತಾರೆ. ಹೀಗಾಗಿ, ಅವರ ಸಮಸ್ಯೆಗಳನ್ನು ವೈಯಕ್ತಿಕವಾಗಿ ಆಲಿಸುತ್ತೇನೆ. ನಿಯಂತ್ರಣ ಕೊಠಡಿ ಸಿಬ್ಬಂದಿ, ದಿನಕ್ಕೆ 50 ನೋಂದಾಯಿತ ಹಿರಿಯ ನಾಗರಿಕರಿಗೆ ಕರೆ ಮಾಡಿ ಸುರಕ್ಷತೆ ಬಗ್ಗೆ ವಿಚಾರಿಸಲಿದ್ದಾರೆ. ಯಾವುದಾದರೂ ಸಮಸ್ಯೆ ಇದ್ದರೆ, ಸಂಬಂಧಪಟ್ಟ ಠಾಣೆಗೆ ರವಾನಿಸಲಿದ್ದಾರೆ.

ಪ್ರಮುಖ ಅಪರಾಧ ಪ್ರಕರಣ
* ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ 2021ರ ಆಗಸ್ಟ್ 20ರಂದು ಬಿಎಂಟಿಸಿಯ ನಿವೃತ್ತ ನೌಕರ ಶಾಂತರಾಜು (65) ಹಾಗೂ ಅವರ ಪತ್ನಿ ಪ್ರೇಮಲತಾ (61) ಅವರನ್ನು ಹತ್ಯೆ ಮಾಡಲಾಗಿತ್ತು. ಅವರ ಮನೆಯಲ್ಲೇ ಬಾಡಿಗೆಗಿದ್ದ ವ್ಯಕ್ತಿ ಸೇರಿ ನಾಲ್ವರನ್ನು ಬಂಧಿಸಿದ್ದ ಪೊಲೀಸರು, 193 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದರು

* ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ 2020ರ ಮೇ 10ರಂದು ನಿವೃತ್ತ ಸರ್ಕಾರಿ ಉದ್ಯೋಗಿ ಗೋವಿಂದಪ್ಪ (65) ಹಾಗೂ ಅವರ ಪತ್ನಿ ಶಾಂತಮ್ಮ ಕೊಲೆ ಮಾಡಲಾಗಿತ್ತು

* ಮಹದೇವಪುರ ಠಾಣೆ ವ್ಯಾಪ್ತಿಯ ಗರುಡಾಚಾರ್ ಪಾಳ್ಯದಲ್ಲಿ 2019ರ ಅಕ್ಟೋಬರ್ 16ರಂದು ಚಂದ್ರೇಗೌಡ (63) ಹಾಗೂ ಅವರ ಪತ್ನಿ ಲಕ್ಷ್ಮಮ್ಮ ಕೊಲೆಯಾಗಿತ್ತು

* ಆರ್‌.ಎಂ.ಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿರುವ ‘ಉಸುರು ಫೌಂಡೇಷನ್’ ವೃದ್ಧಾಶ್ರಮದ ಶಾಖೆಯಲ್ಲಿ ಕಮಲಮ್ಮ (82) ಅವರನ್ನು ಕತ್ತಲು ಕೋಣೆಯಲ್ಲಿರಿಸಿ ಆಹಾರ ನೀಡದೇ ಕೊಲೆ ಮಾಡಲಾಗಿತ್ತು.

**
ಗಸ್ತಿನಲ್ಲಿರುವ ಸಿಬ್ಬಂದಿ, ತಮ್ಮ ಠಾಣೆ ವ್ಯಾಪ್ತಿಯ ನಿವಾಸಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರಬೇಕು. ಮನೆ ಹಾಗೂ ಅಪಾರ್ಟ್‌ಮೆಂಟ್‌ ಸಮಚ್ಚಯಗಳಲ್ಲಿರುವ ಹಿರಿಯ ನಾಗರಿಕರ ಪರಿಚಯವೂ ಅವರಿಗೆ ಇರಬೇಕು. ಪೊಲೀಸರ ಮೇಲೆ ಹಿರಿಯ ನಾಗರಿಕರಿಗೆ ನಂಬಿಕೆ ಬರುವ ರೀತಿಯಲ್ಲಿ ಗಸ್ತು ಸಿಬ್ಬಂದಿ ಕೆಲಸ ಮಾಡಬೇಕು.
-ಎಸ್.ಟಿ.ರಮೇಶ್, ನಿವೃತ್ತ ಡಿಜಿ–ಐಜಿಪಿ

*
ಬಹುತೇಕ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ಅಪರಿಚಿತ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲಾಗಿದೆ. ಆಕಸ್ಮಾತ್ ಯಾರಾದರೂ ಬಂದರೆ, ಅವರ ಮೇಲೆ ನಿಗಾ ವಹಿಸಲು ಕೆಲವರು ಮೊಬೈಲ್ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲಿ ಸುರಕ್ಷತೆ ಭಾವ ಮೂಡಿದೆ.
- ವಿಕ್ರಮ್ ರೈ, ಬೆಂಗಳೂರು ಅಪಾರ್ಟ್‌ಮೆಂಟ್, ನಿವಾಸಿಗಳ ಒಕ್ಕೂಟ (ಬಿಎಎಫ್‌)

*
ಬೆಂಗಳೂರಿನಲ್ಲಿ ಸುಮಾರು 1.30 ಕೋಟಿ ಜನಸಂಖ್ಯೆಯಿದ್ದು, 20 ಸಾವಿರ ಪೊಲೀಸರು ಮಾತ್ರ ಇದ್ದಾರೆ. ಅವರ ಮೇಲೆ ಕೆಲಸದ ಒತ್ತಡ ಸಾಕಷ್ಟಿದೆ. ಎಲ್ಲರ ಸುರಕ್ಷತೆ ಕಾಯಲು ಹಾಗೂ ಅಪರಾಧ ತಡೆಯಲು ಕನಿಷ್ಠ 50,000 ಸಿಬ್ಬಂದಿಯಾದರೂ ನಗರಕ್ಕೆ ಬೇಕು.
–ಭಾಸ್ಕರ್‌ರಾವ್, ರೈಲ್ವೆ ಪೊಲೀಸ್ ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT