ಬೆಂಗಳೂರು/ಪೀಣ್ಯದಾಸರಹಳ್ಳಿ: 'ಸಾಮರ್ಥ್ಯ ಪರಿಶೀಲನೆ'ಗಾಗಿ ಜನವರಿ16ರಿಂದ ಮೂರು ದಿನಗಳು ಪೀಣ್ಯಾ ಮೇಲ್ಸೇತುವೆಯನ್ನು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ ತುಮಕೂರು ರಸ್ತೆಯಲ್ಲಿ (ಬೆಂಗಳೂರು ಕಡೆಗೆ ಸಾಗುವ ರಸ್ತೆ) ಬೆಳಗ್ಗಿನಿಂದ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ.
ಬೆಂಗಳೂರು ಕಡೆಗೆ ಸಾಗುವ ರಸ್ತೆಯಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. 8ನೇ ಮೈಲಿ, ಜಾಲಹಳ್ಳಿ ಕ್ರಾಸ್ ,ಪೀಣ್ಯ ಮೂಲಕ ಗೊರಗುಂಟೆ ಪಾಳ್ಯ ತಲುಪಲು ವಾಹನ ಸವಾರರು ಪರದಾಡುವಂತಾಗಿದೆ.
ಕೆಲವು ವಾಹನ ಸವಾರರು ಸರ್ವೀಸ್ ರಸ್ತೆಗಳನ್ನು ಬಳಸುತ್ತಿರುವುದರಿಂದ ಅಲ್ಲೂ ವಾಹನ ದಟ್ಟಣೆ ಹೆಚ್ಚಾಗಿದೆ.
ಬೆಂಗಳೂರು ಪ್ರವೇಶಿಸುವ ಮೊದಲ ಟೋಲ್ಗೇಟ್ (ವಿಡಿಯಾ ಸಮೀಪ)ನಿಂದಲೇ ವಾಹನ ದಟ್ಟಣೆ ಆರಂಭವಾಗಿದೆ. ಸಂಜೆ ವೇಳೆಗೆ ಇನ್ನೂ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.