ಬೆಂಗಳೂರು: ರಾಜರಾಜೇಶ್ವರಿನಗರದ ಕೆಂಪೇಗೌಡ ರಸ್ತೆಯಲ್ಲಿರುವ ಭೈರವೇಶ್ವರ ಬ್ಯಾಟರಿ ಅಂಗಡಿಯಲ್ಲಿ ಕಳವು ಮಾಡಿದ್ದ ಆರೋಪದಡಿ ಮೊಹಮ್ಮದ್ ಸಾಹಿಲ್ನನ್ನು (23) ಪೊಲೀಸರು ಬಂಧಿಸಿದ್ದಾರೆ.
‘ಬನ್ನೇರುಘಟ್ಟ ರಸ್ತೆಯ ದೇವರಚಿಕ್ಕನಹಳ್ಳಿ ನಿವಾಸಿ ಸಾಹಿಲ್, ಮಾರ್ಚ್ 4ರಂದು ಕೃತ್ಯ ಎಸಗಿ ಪರಾರಿಯಾಗಿದ್ದ. ಆತನಿಂದ ₹ 5.75 ಲಕ್ಷ ಮೌಲ್ಯದ 175 ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಅಂಗಡಿಯ ಶೆಟರ್ ಮೀಟಿ ಒಳನುಗ್ಗಿದ್ದ ಆರೋಪಿ, ವಿವಿಧ ಕಂಪನಿಯ ಬ್ಯಾಟರಿಗಳನ್ನು ಕದ್ದುಕೊಂಡು ಆಟೊದಲ್ಲಿ ಪರಾರಿಯಾಗಿದ್ದ. ಅದೇ ಬ್ಯಾಟರಿಗಳನ್ನು ಮಾರಾಟ ಮಾಡಿದ್ದ ಆರೋಪಿ, ಬಂದ ಹಣದಲ್ಲಿ ಆಟೊ ಖರೀದಿ ಮಾಡಿದ್ದ’ ಎಂದರು.