ಬೆಂಗಳೂರು: ಜಾಹೀರಾತು ಶುಲ್ಕ ಪಾವತಿಸದ ಮೇಲ್ಸೇತುವೆ, ಸ್ಕೈವಾಕ್, ಬಸ್ ತಂಗುದಾಣಗಳಲ್ಲಿನ ಜಾಹೀರಾತುಗಳ ಮೇಲೆ ಬಿಬಿಎಂಪಿ ನೋಟಿಸ್ ಲಗತ್ತಿಸುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬಸ್ ತಂಗುದಾಣ, ಸ್ಕೈವಾಕ್ನಲ್ಲಿ ಜಾಹೀರಾತು ಪ್ರದರ್ಶನದ ನೆಲಬಾಡಿಗೆ, ಸೇವಾ ತೆರಿಗೆಗಳು ಸೇರಿದಂತೆ ₹100 ಕೋಟಿಗೂ ಅಧಿಕ ಬಾಕಿ ಇದೆ. ಏಜೆನ್ಸಿಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಲಾಗಿತ್ತು. ಆದರೂ ವಸೂಲಿ ಆಗಿರಲಿಲ್ಲ. ಹೀಗಾಗಿ ಬಿಬಿಎಂಪಿ ಕೆಲವೆಡೆ ಜಾಹೀರಾತು ತೆರವು ಕಾರ್ಯಾಚರಣೆ ಕೈಗೊಂಡಿದೆ. ಬಸ್ ತಂಗುದಾಣಗಳ ಮೇಲೆ ನೋಟಿಸ್ ಅಂಟಿಸುತ್ತಿದೆ.
‘ಯಾವುದೇ ರೀತಿಯ ಶುಲ್ಕ ಪಾವತಿಯಾಗದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಎಲ್ಲವನ್ನೂ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೇಶ್ ಮೌದ್ಗೀಲ್ ಹೇಳಿದ್ದರು.
ಶುಲ್ಕ ಪಾವತಿಸದ ಜಾಹೀರಾತುಗಳ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದ್ದು, ಎಲ್ಲ ಅಕ್ರಮ ಜಾಹೀರಾತುಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಪಾದಚಾರಿ ಮೇಲ್ಸೇತುವೆಗಳು, ಬಸ್ ತಂಗುದಾಣದ ನೆಲಬಾಡಿಗೆ, ಜಾಹೀರಾತು ಶುಲ್ಕವನ್ನು ಐದಾರು ವರ್ಷಗಳಿಂದ ವಸೂಲಿ ಮಾಡಿಲ್ಲ. ₹100 ಕೋಟಿಗೂ ಅಧಿಕ ಮೊತ್ತ ಬಾಕಿ ಉಳಿದಿದೆ. ಈ ಬಗ್ಗೆ ಹತ್ತಾರು ಕಂಪನಿಗಳಿಗೆ ಡಿಮ್ಯಾಂಡ್ ನೋಟಿಸ್ ನೀಡಿರುವ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಎಸ್. ಅಮರೇಶ್ ಅವರು ಪಡೆದುಕೊಂಡಿದ್ದರು. ಇದನ್ನು ಆಧರಿಸಿ, ‘ಜಾಹೀರಾತು: ₹100 ಕೋಟಿಗೂ ಹೆಚ್ಚು ಬಾಕಿ’ ಶೀರ್ಷಿಕೆಯಡಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.
ಸೈನ್ ಪೋಸ್ಟ್ ಇಂಡಿಯಾ, ಡಿಜಿಟಲ್ ಆ್ಯಡ್ ಸೈನ್ಸ್, ಟೈಮ್ಸ್ ಇನ್ನೋವೇಟಿವ್ ಮೀಡಿಯಾ, ಓಓಎಚ್ ಅಡ್ವರ್ಟೈಸ್ಮೆಂಟ್ ಸರ್ವೀಸಸ್, ಪ್ರಕಾಶ್ ಆರ್ಟ್ಸ್, ವಾಂಟೇಜ್ ಅಡ್ವರ್ಟೈಸಿಂಗ್, ಪಯನೀರ್ ಪಬ್ಲಿಸಿಟಿ ಕಾರ್ಪೊರೇಷನ್, ಸ್ಕೈಲೈನ್ ಅಡ್ವರ್ಟೈಸಿಂಗ್, ಸಹಯೋಗ– ಇಂಡಿಯಾ ಕೌನ್ಸಿಲ್, ಆ್ಯಡ್ ಏಜ್ ಔಟ್ಡೋರ್ ಅಡ್ವ ಟೈಸ್ಮೆಂಟ್, ಜೈವಿನ್ ಔಟ್ ಡೋರ್ ಮೀಡಿಯಾ, ಡಿಸೈನ್ 55 ಅಡ್ವಟೈಸ್ಮೆಂಟ್, ಅಕಾರ್ಡ್ ಡಿಸ್ಪ್ಲೆ ಸರ್ವೀಸ್ ಏಜೆನ್ಸಿಗಳು ಶುಲ್ಕ, ಬಾಡಿಗೆ, ಸೇವಾ ತೆರಿಗೆಯನ್ನು ಬಾಕಿ ಉಳಿಸಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.