ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆಗೆ ಮನಸ್ಸು ಸಾಕು: ಬೇಜವಾಡ ವಿಲ್ಸನ್‌

ಸಫಾಯಿ ಕರ್ಮಚಾರಿಗಳ ಸಾವು ತಡೆಯುವುದೇ ಗುರಿ
Last Updated 16 ಸೆಪ್ಟೆಂಬರ್ 2018, 2:03 IST
ಅಕ್ಷರ ಗಾತ್ರ

ಬೆಂಗಳೂರು: ಸೇವೆ ಮಾಡುವ ಮನಸ್ಸೊಂದಿದ್ದರೆ ನಿಮಗೆ ಯಾವ ಯೋಜನೆ, ಕಾರ್ಯವಿಧಾನಗಳು ಬೇಡ. ಎಲ್ಲ ಹಾದಿಗಳು ತಂತಾನೆ ತೆರೆದುಕೊಳ್ಳುತ್ತವೆ. – ಇದು ಸಫಾಯಿ ಕರ್ಮಚಾರಿ ಆಂದೋಲನದ ನಾಯಕ, ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್‌ ಅವರ ಅಂತರಂಗ.

ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದಲ್ಲಿ ಶನಿವಾರ ನಡೆದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮನಸ್ಸು ತೆರೆದಿಟ್ಟರು. ಅವರ ಮಾತಿನ ಕೆಲವು ಝಲಕ್‌...

ದೆಹಲಿಯಲ್ಲಿ ಡಿಎಲ್‌ಎಫ್‌ ಅಪಾರ್ಟ್‌ಮೆಂಟ್‌ನಲ್ಲಿ ಶೌಚಗುಂಡಿ ಸ್ವಚ್ಛತೆಗೆ ಇಳಿದಿದ್ದ ಐವರು ಕಾರ್ಮಿಕರು ಮೃತಪಟ್ಟರು. 26 ಮಹಡಿಗಳ ಕಟ್ಟಡ ಕಟ್ಟುವ, ಅದರ ಮೇಲೇರುವ ತಂತ್ರಜ್ಞಾನ ಇರುವ ನಮ್ಮಲ್ಲಿ ಶೌಚಗುಂಡಿ ಸ್ವಚ್ಛಗೊಳಿಸುವ ತಂತ್ರಜ್ಞಾನ ಇಲ್ಲವೇ?

ಅಮಾಯಕರ ಸಾವುಗಳಾದಾಗ ಜವಾಬ್ದಾರಿ ಹೊರುವ ಒಬ್ಬನೇ ಅಧಿಕಾರಿ ಅಥವಾ ಜನನಾಯಕ ಇರುವುದಿಲ್ಲ. ಎಲ್ಲರೂ ತಪ್ಪಿಸಿಕೊಳ್ಳುವರೇ. ಒಬ್ಬ ಜವಾಬ್ದಾರಿಯುತ ನಾಯಕ ಹುಟ್ಟಿ ಬರಬೇಕಿದೆ. ಮಲಹೊರುವ ಪದ್ಧತಿ ಇಲ್ಲ ಎಂದು ಎಲ್ಲ ಜಿಲ್ಲಾಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದ್ದಾರೆ. ಆ ತಾಕತ್ತು ಅವರಿಗಿದೆ. ಈ ಪದ್ಧತಿಯನ್ನು ಕೈಬಿಡಬೇಕು ಎಂದು ನಡೆಸಿದ ಹೋರಾಟ ಸಂಬಂಧಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ 23 ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದ್ದಾರೆ. ಯಾರಿಂದಲೂ ನಮಗೆ ನ್ಯಾಯ ಸಿಕ್ಕಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಸೇವೆ ಮಾಡುವುದು ಬಹಳ ಕಷ್ಟ. ನೀವು ಒಳ್ಳೆಯದಕ್ಕೆ ಮುಂದಾದಾಗ ಸರ್ಕಾರ, ಅಧಿಕಾರಶಾಹಿ ವ್ಯವಸ್ಥೆ, ಕಾನೂನು ಎಲ್ಲವೂ ನಮ್ಮ ವಿರುದ್ಧ ತಿರುಗಿ ಬೀಳುತ್ತವೆ. ಪ್ರಜಾಪ್ರಭುತ್ವದ ವಿನ್ಯಾಸ ಶ್ರೀಮಂತರಿಗಷ್ಟೇ ಅನುಕೂಲವಾಗುವಂತೆ ಸುಂದರವಾಗಿದೆ.

ಅಮ್ಮನ ನೆನಪು

ನನ್ನ ಅಮ್ಮನಿಗೊಂದು ಹೆಸರೇ ಇರಲಿಲ್ಲ. ಅವರನ್ನು ಚಿನ್ನಮ್ಮ ಎಂದು ಕರೆಯುತ್ತಿದ್ದರು. ಅಂದರೆ ಸಣ್ಣವಳು ಎಂದು ಅರ್ಥ ಅಷ್ಟೆ. ಅವರನ್ನು ಕರೆಯಲು ಹೆಸರು ಇರಬೇಕು ಎಂದು ಯಾರಿಗೂ ಅನಿಸಲಿಲ್ಲ. ಎಲ್ಲರನ್ನೂ ಒಟ್ಟಾಗಿ ತೋಟಿ ಎಂದು ಕರೆಯುತ್ತಿದ್ದರು. ಈ ಕೆಲಸ ಏಕೆ ಮಾಡಬೇಕು ಎಂದು ಅಮ್ಮನನ್ನು ಕೇಳಿದೆ. ಅವರೆಂದರು, ಅದನ್ನು ನೀವು ಕೇಳಬಾರದು. ನೀವು ಈ ಕೆಲಸ ಮುಂದುವರಿಸಬಾರದು. ಚೆನ್ನಾಗಿ ಓದಿ ಈ ಕೆಲಸದಿಂದ ದೂರ ಹೋಗಬೇಕು ಎನ್ನುತ್ತಿದ್ದರು. ಹೌದು ಸಫಾಯಿ ಕರ್ಮಚಾರಿಗಳಿಗೆ ತಮ್ಮ ವ್ಯಥೆ ಹೇಳಿಕೊಳ್ಳಲು ಒಂದು ಭಾಷೆಯೂ ಇಲ್ಲ.

ಜ್ವಾಲಾಮುಖಿಯಂಥ ವ್ಯಥೆ

ವ್ಯಥೆ ಜ್ವಾಲಾಮುಖಿಯಂತೆ ಮಡುಗಟ್ಟಿದೆ. ಹಾಗಾಗಿ ನನ್ನದು ಸಫಾಯಿ ಕರ್ಮಚಾರಿ ಎಂಬುದೇ ಭಾಷೆ. ಹೋರಾಟಗಳ ಮೂಲಕ ಸ್ವಲ್ಪ ಹೆಸರು ಬಂದಾಗ ರಾಜಕೀಯ ಸೇರುವಂತೆ ಒತ್ತಡ ಬಂದಿತು. ಆಗ ನನ್ನನ್ನೇ ಪ್ರಶ್ನಿಸಿಕೊಂಡೆ. ನನ್ನ ಹಿನ್ನೆಲೆ, ಬಂದ ಉದ್ದೇಶ ಇತ್ಯಾದಿ ಬಗ್ಗೆ ಯೋಚಿಸಿದೆ. ಈ ಹೊತ್ತಿನಲ್ಲಿ ಅಂಬೇಡ್ಕರ್‌ ಬಗ್ಗೆ ಓದಿದೆ. ಅದು ನನ್ನ ಬದುಕನ್ನೇ ಬದಲಾಯಿಸಿತು. ಆದ್ದರಿಂದ ಇಂದಿನ ಶಿಕ್ಷಣದಲ್ಲಿ ಎಲ್ಲ ತರಗತಿಗಳ ಪಠ್ಯದಲ್ಲಿ ಅಂಬೇಡ್ಕರ್‌ ಅವರ ವಿಚಾರಧಾರೆಯನ್ನು ಅಧ್ಯಯನ ವಸ್ತುವನ್ನಾಗಿ ಸೇರಿಸಬೇಕು.

ಓದಿದ್ದು, ಬೆಳೆದದ್ದು...

ನಾನಿ ಓದಿದ್ದು ಕೇವಲ 10ನೇ ತರಗತಿ. ಆ ಪ್ರಮಾಣ ಪತ್ರ ನನ್ನಲ್ಲಿದೆ. ಆ ಬಳಿಕ ಬೇರೆ ಬೇರೆ ಪದವಿ ಕೋರ್ಸ್‌ಗಳಿಗೆ ಸೇರಿದೆ. ಯಾವುದನ್ನೂ ಪೂರ್ಣಗೊಳಿಸಲು ಆಗಲಿಲ್ಲ. ಈಗ ಕೆಲವು ವಿಶ್ವವಿದ್ಯಾಲಯಗಳು ಇವ ನಮ್ಮ ವಿದ್ಯಾರ್ಥಿ ಎಂದು ಹೇಳಿಕೊಳ್ಳುತ್ತಿವೆ. ಅದಕ್ಕೆ ನನ್ನ ಆಕ್ಷೇಪ ಇಲ್ಲ.

ಇಂಗ್ಲಿಷ್‌ ಶಾಲೆಗೆ ಹೋಗಬೇಕಿತ್ತು. ಆದರೆ ತರಗತಿಯೊಳಗೆ ಹೋಗುವಾಗ ಅದೇನೋ ಹೇಳುತ್ತಾರೆ. ‘ಮೇ ಐ ಕಮಿನ್‌’ ಎಂದು ಹೇಳಬೇಕು. ಅದು ನನಗೆ ತಿಳಿದದ್ದು ಇತ್ತೀಚೆಗೆ.

ಕರ್ನಾಟಕದ ಬಗ್ಗೆ...

ಸಾಮಾನ್ಯನೊಬ್ಬ ಮುಕ್ತವಾಗಿ ವಿಧಾನಸೌಧದೊಳಗೆ ಹೋಗಿ ತನಗೆ ಬೇಕಾದವರನ್ನು ಭೇಟಿಯಾಗುವ ಅವಕಾಶ ಇರುವುದು ಕರ್ನಾಟಕದಲ್ಲಿ ಮಾತ್ರ. ಇಲ್ಲಿ ಎಲ್ಲರನ್ನೂ ಸ್ವೀಕರಿಸುತ್ತಾರೆ. ಹಾಗೆಂದು ಇಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಅರ್ಥವಲ್ಲ. ಗೌರಿ, ಕಲಬುರ್ಗಿ ಹತ್ಯೆ ಆಗಿದ್ದು ಇದೇ ನೆಲದಲ್ಲಿಯೇ ಅಲ್ಲವೇ? ಕೆಲವು ಶಕ್ತಿಗಳು ಈ ನೆಲದ ಸಂಸ್ಕೃತಿಗೆ ವಿರುದ್ಧವಾಗಿಯೇ ವರ್ತಿಸುತ್ತಿವೆ.

ಆಗಬೇಕಾದದ್ದು...

ಕರ್ನಾಟಕದಲ್ಲಿ ಎಲ್ಲ ಪ್ರಗತಿಪರ ಸಂಘಟನೆಗಳು ಒಂದೇ ವೇದಿಕೆಯಡಿ ಬರಬೇಕು. ಕೊನೇ ಪಕ್ಷ ಮಲದ ಗುಂಡಿಗಳಲ್ಲಿ ಚರಂಡಿ ಸ್ವಚ್ಛತೆಯಲ್ಲಿ ಕಾರ್ಮಿಕರು ಸಾಯುವುದು ತಪ್ಪಬೇಕು. ಈ ನಿಟ್ಟಿನಲ್ಲಿ ಹೋರಾಟ ಕಟ್ಟೋಣ. ಸರ್ಕಾರಕ್ಕೆ ಒಂದು ವರ್ಷ ಗಡುವು ಕೊಡೋಣ. ಪರಿಸ್ಥಿತಿ ಬದಲಾಗದಿದ್ದರೆ. ಸರ್ಕಾರದ ವಿರುದ್ಧ ಧಿಕ್ಕಾರ ಕೂಗೋಣ. ಆದರೆ, ರಾಜ್ಯದ ವಿರುದ್ಧ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT