ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 2 ಸಾವಿರ ಶಿಶುಗಳಿಗೆ ನೆರವಾದ ‘ಅಮೃತಧಾರೆ’

ವಾಣಿವಿಲಾಸ ಆಸ್ಪತ್ರೆಯ ಎದೆಹಾಲು ಬ್ಯಾಂಕ್‌ಗೆ ಉತ್ತಮ ಸ್ಪಂದನೆ * ಆಸ್ಪತ್ರೆ ಹೊರಗಡೆಯ ತಾಯಂದಿರಿಂದಲೂ ಎದೆಹಾಲು ದಾನ
Published 5 ನವೆಂಬರ್ 2023, 23:30 IST
Last Updated 5 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ವಾಣಿವಿಲಾಸ ಆಸ್ಪತ್ರೆಯ ‘ಅಮೃತಧಾರೆ’ ಎದೆಹಾಲು ಬ್ಯಾಂಕಿಗೆ ತಾಯಂದಿರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಬ್ಯಾಂಕಿನ ನೆರವಿನಿಂದ ಎರಡು ಸಾವಿರ ಶಿಶುಗಳಿಗೆ ತಾಯಂದಿರ ಎದೆಹಾಲು ಒದಗಿಸಲಾಗಿದೆ. 

ಅಗತ್ಯ ಪ್ರಮಾಣದಲ್ಲಿ ಎದೆಹಾಲು ಸಿಗದ ಹಾಗೂ ಎದೆಹಾಲು ವಂಚಿತ ಮಕ್ಕಳಿಗಾಗಿ ನಿರ್ಮಿಸಲಾಗಿದ್ದ ಈ ಬ್ಯಾಂಕ್‌ಗೆ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. ಇದು ಸರ್ಕಾರಿ ವ್ಯವಸ್ಥೆಯಡಿ ನಿರ್ಮಾಣವಾದ ರಾಜ್ಯದ ಪ್ರಥಮ ಎದೆಹಾಲು ಬ್ಯಾಂಕ್ ಎಂಬ ಹಿರಿಮೆಗೆ ಭಾಜನವಾಗಿದೆ. ಪ್ರಾರಂಭಿಕ ದಿನಗಳಲ್ಲಿ ಮಾಹಿತಿ ಕೊರತೆಯಿಂದಾಗಿ ಎದೆಹಾಲು ದಾನಕ್ಕೆ ತಾಯಂದಿರು ಹಿಂದೇಟು ಹಾಕಿದ್ದರು. ಆದರೆ, ಈಗ ಎದೆಹಾಲಿನ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿದ್ದರಿಂದ ಆಸ್ಪತ್ರೆಯಲ್ಲಿನ ತಾಯಂದಿರ ಜತೆಗೆ ಹೊರಗಡೆಯಿಂದಲೂ ತಾಯಂದಿರು ಆಸ್ಪತ್ರೆಗೆ ಬಂದು, ಎದೆಹಾಲು ದಾನ ಮಾಡುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಎದೆಹಾಲು ಸಂಗ್ರಹಿಸಲು ಆಸ್ಪತ್ರೆಗೆ ಸಾಧ್ಯವಾಗಿದೆ. 

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿಯ ಪ್ರಕಾರ ಆರು ತಿಂಗಳೊಳಗಿನ ಶೇ 46 ರಷ್ಟು ಶಿಶುಗಳಿಗೆ ಸಮರ್ಪಕವಾಗಿ ಸ್ತನ್ಯಪಾನವಾಗುತ್ತಿಲ್ಲ. ಎಲ್ಲ ಮಕ್ಕಳಿಗೂ ತಾಯಂದಿರ ಎದೆಹಾಲು ದೊರೆಯಬೇಕೆಂಬ ಉದ್ದೇಶದಿಂದಲೇ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿರುವ ವಾಣಿವಿಲಾಸ ಆಸ್ಪತ್ರೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ತಾಯಂದಿರ ಎದೆಹಾಲಿನ ಬ್ಯಾಂಕ್‌ ನಿರ್ಮಿಸಲಾಗಿತ್ತು. ಆಸ್ಪತ್ರೆಯಲ್ಲಿ ಜನಿಸಿದ ಶಿಶುಗಳಿಗೆ ಅಲ್ಲಿನ ವೈದ್ಯರು ಪರಿಶೀಲಿಸಿ, ಎದೆಹಾಲು ಪೂರೈಕೆಗೆ ಬ್ಯಾಂಕ್‌ಗೆ ಶಿಫಾರಸು ಸಲ್ಲಿಸುತ್ತಿದ್ದಾರೆ. ನವಜಾತ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಇರುವ ಶಿಶುಗಳಿಗೆ ಪ್ರತಿನಿತ್ಯ ಸರಾಸರಿ ಒಂದೂವರೆ ಲೀಟರ್‌ ಎದೆಹಾಲು ಒದಗಿಸಲಾಗುತ್ತಿದೆ. 

290 ಲೀ. ಸಂಗ್ರಹ: ಎದೆಹಾಲು ಬ್ಯಾಂಕ್‌ನಲ್ಲಿ ಆಸ್ಪತ್ರೆಯೊಳಗಿನ ದಾನಿಗಳಿಂದ ಈವರೆಗೆ 270.09 ಲೀ. ಎದೆಹಾಲು ಸಂಗ್ರಹಿಸಲಾಗಿದೆ. ಆಸ್ಪತ್ರೆ ಹೊರಗಿನ ತಾಯಂದಿರಿಂದ 19.84 ಲೀ. ಎದೆಹಾಲನ್ನು ದಾನವಾಗಿ ಪಡೆಯಲಾಗಿದೆ. ಆಸ್ಪತ್ರೆಯೊಳಗಿನ ತಾಯಂದಿರಲ್ಲಿ 1,307 ಮಂದಿ ಎದೆಹಾಲನ್ನು ದಾನ ಮಾಡಿದರೆ, ಹೊರಗಡೆಯಿಂದ ಹತ್ತು ತಾಯಂದಿರು ದಾನವಾಗಿ ನೀಡಿದ್ದಾರೆ. ವಿವಿಧ ಆಸ್ಪತ್ರೆಗಳೂ ಎದೆಹಾಲಿಗೆ ಇಲ್ಲಿನ ಬ್ಯಾಂಕ್‌ಗೆ ಬೇಡಿಕೆ ಸಲ್ಲಿಸುತ್ತಿವೆ. ಆದರೆ, ಆಸ್ಪತ್ರೆ ನೀತಿಯ ಪ್ರಕಾರ ಹೊರಗಡೆಗೆ ನೀಡಲು ಅವಕಾಶವಿಲ್ಲ. 

‘ನವಜಾತ ತೀವ್ರ ನಿಗಾ ಘಟಕದಲ್ಲಿ (ಎನ್‌ಐಸಿಯು) ಇರುವ ಎದೆಹಾಲಿನಿಂದ ವಂಚಿತರಾಗಿರುವ ಶಿಶುಗಳಿಗೆ ಈ ಬ್ಯಾಂಕ್‌ನಿಂದ ಎದೆಹಾಲು ಪೂರೈಸಲಾಗುತ್ತದೆ. ಎದೆಹಾಲನ್ನು ಪಡೆಯುವಾಗ ಅಗತ್ಯ ಪರೀಕ್ಷೆ ಮಾಡಲಾಗುತ್ತದೆ. ಆರೋಗ್ಯವಂತ ತಾಯಿಯಿಂದ ಮಾತ್ರ ಎದೆಹಾಲನ್ನು ಪಡೆಯಲಾಗುತ್ತದೆ. ಹೊರಗಡೆಯ ದಾನಿಗಳು ಆಸ್ಪತ್ರೆಯನ್ನು ಸಂಪರ್ಕಿಸಿದಲ್ಲಿ ವಿಡಿಯೊ ಕಾಲ್‌ ಮೂಲಕ ಅಗತ್ಯ ಮಾರ್ಗದರ್ಶನ ಮಾಡಲಾಗುತ್ತದೆ. ಬಳಿಕ ಆಸ್ಪತ್ರೆಗೆ ಎದೆಹಾಲನ್ನು ದಾನ ಮಾಡಬಹುದು’ ಎಂದು ಎದೆಹಾಲು ಬ್ಯಾಂಕ್‌ನ ಅರ್ಚನಾ ತಿಳಿಸಿದರು.  

‘6 ತಿಂಗಳು ಶೇಖರಣೆ ಸಾಧ್ಯ’

‘ಬ್ಯಾಂಕ್‌ನಲ್ಲಿ ಸಂಗ್ರಹಿಸಿದ ಹಾಲನ್ನು ಪ್ಯಾಶ್ಚರೀಕರಿಸಿದ ಬಳಿಕ ಪ್ಯಾಕ್‌ ಮಾಡಿ 120 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂರಕ್ಷಿಸಿ ಇಡಲಾಗುತ್ತದೆ. ಮಗುವಿಗೆ ಕುಡಿಸುವಾಗ ಅದನ್ನು ಸಾಮಾನ್ಯ ಉಷ್ಣಾಂಶಕ್ಕೆ ತರಲಾಗುತ್ತದೆ. ಇದನ್ನು ಆರು ತಿಂಗಳವರೆಗೂ ಶೇಖರಿಸಿಡಲು ಸಾಧ್ಯ. ಖಾಸಗಿ ಎದೆಹಾಲು ಬ್ಯಾಂಕ್‌ಗಳಲ್ಲಿ 150 ಮಿ.ಲೀ. ಹಾಲಿಗೆ ₹6500ರಿಂದ ₹8000 ಪಾವತಿಸಬೇಕಾಗುತ್ತದೆ. ಇಲ್ಲಿ ಎದೆಹಾಲು ಅಗತ್ಯವಿರುವ ಮಕ್ಕಳಿಗೆ ಉಚಿತವಾಗಿ ಒದಗಿಸಲಾಗುತ್ತಿದೆ’ ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯರು ತಿಳಿಸಿದರು.

ಯಾರಿಗೆಲ್ಲ ಹಾಲು ಪೂರೈಕೆ?

ಅವಧಿ ಪೂರ್ವ ಜನಿಸಿದ ಶಿಶುಗಳು ಅಸ್ವಸ್ಥ ಶಿಶುಗಳು ಅನಾಥ ಶಿಶುಗಳು ಮೃತಪಟ್ಟ ತಾಯಂದಿರ ಶಿಶುಗಳು ರೋಗಗ್ರಸ್ತ ಬಾಣಂತಿಯರ ಶಿಶುಗಳು ಹಾಗೂ ಎದೆಹಾಲು ಉತ್ಪಾದನೆ ಆಗದಿರುವ ತಾಯಂದಿರ ಶಿಶುಗಳಿಗೆ ಈ ಕೇಂದ್ರದಿಂದ ಎದೆಹಾಲನ್ನು ನೀಡಲಾಗುತ್ತದೆ.

ಎದೆಹಾಲು ದಾನಕ್ಕೆ ಸಂಪರ್ಕಕ್ಕೆ: 9886931261

ಎದೆಹಾಲು ಬ್ಯಾಂಕ್‌ಗೆ ತಾಯಂದಿರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆಸ್ಪತ್ರೆಯ ಹೊರಗಿನ ತಾಯಂದಿರು ದಾನದ ಬಗ್ಗೆ ವಿಚಾರಿಸುತ್ತಿದ್ದಾರೆ. ಕೆಲವರು ಸಂಗ್ರಹಿಸಿ ಕಳುಹಿಸುತ್ತಿದ್ದಾರೆ.
–ಡಾ. ಸವಿತಾ ಸಿ. ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT