ನಗರದ ಪಾದಚಾರಿ ಮಾರ್ಗಗಳು ನಾಗರಿಕರಿಗೆ ಸುರಕ್ಷಿತವಲ್ಲ ಎಂಬ ಆರೋಪ ಆಗಾಗ್ಗೆ ಕೇಳಿಬರುತ್ತಿದೆ. ವ್ಯಾಪಾರಿಗಳು, ಕೇಬಲ್ಗಳು, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ಗಳು ಈ ಮಾರ್ಗವನ್ನು ಆವರಿಸಿಕೊಂಡಿರುತ್ತವೆ. ಇದರಿಂದ ಸಾಕಷ್ಟು ಅಪಘಾತಗಳೂ ಸಂಭವಿಸಿವೆ. ಕಾಡುಗೋಡಿಯಲ್ಲಿ ವಿದ್ಯುತ್ ತಂತಿ ಪಾದಚಾರಿ ಮಾರ್ಗದ ಮೇಲೆ ಬಿದ್ದು ತಾಯಿ–ಮಗು ಸುಟ್ಟು ಹೋಗಿದ್ದು ಇತ್ತೀಚಿನ ದುರಂತ.
ಇಂತಹ ಅವಘಡಗಳಾದಾಗ ಬಿಬಿಎಂಪಿ, ಬೆಸ್ಕಾಂ ಹಾಗೂ ಇತರೆ ಇಲಾಖೆಗಳು ಒಂದಷ್ಟು ಕೆಲಸ ಮಾಡಿ, ನಂತರ ಸುಮ್ಮನಾಗುತ್ತವೆ. ಪಾದಚಾರಿ ಮಾರ್ಗದಲ್ಲಿ ಓಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಕ್ರಮ ಕೈಗೊಳ್ಳುವುದಿಲ್ಲ. ನಾಗರಿಕರ ಸಾವಿರಾರು ದೂರು, ನ್ಯಾಯಾಲಯಗಳ ಆದೇಶಗಳೂ ಪಾದಚಾರಿ ಮಾರ್ಗಗಳನ್ನು ಸುರಕ್ಷಿತವಾಗಿರಿಸಿಲ್ಲ. ಜನನಿಬಿಡ ಪಾದಚಾರಿ ಮಾರ್ಗಗಳಲ್ಲಿ ಕೈಗೆಟಕುವಂತಹ ಮಟ್ಟದಲ್ಲಿ ಟ್ರಾನ್ಸ್ಫಾರ್ಮರ್, ವಿದ್ಯುತ್ ತಂತಿಗಳಿವೆ. ಇಂತಹ ಕೆಲವು ಸ್ಥಳಗಳಲ್ಲಿನ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.