ಧರೆಗುರುಳುವ ಮರಗಳು, ತಾಸುಗಟ್ಟಲೇ ಸರದಿಯಲ್ಲಿ ನಿಲ್ಲುವ ವಾಹನಗಳು, ದ್ವೀಪದಂತಾಗುವ ಬಡಾವಣೆಗಳು. ಬೆಂಗಳೂರಿನಲ್ಲಿ ಜೋರು ಮಳೆಯಾದರೆ ಸಾಕು ಈ ದೃಶ್ಯ ಮತ್ತು ಸಮಸ್ಯೆಗಳು ಸಾಮಾನ್ಯ ಎನ್ನುವಂತಿರುತ್ತವೆ. ಅದರಲ್ಲಿಯೂ, ಬಿರುಬಿಸಿಲಿನ ಮೇ ತಿಂಗಳಲ್ಲಿಯೇ ಅಧಿಕ ಮಳೆಯನ್ನು ಮಹಾನಗರ ಕಾಣುತ್ತಿದೆ. ಚಂಡಮಾರುತದ ಆರ್ಭಟ ಮತ್ತು ಅವಧಿಗಿಂತ ಒಂದು ತಿಂಗಳು ಮುಂಚಿತವಾಗಿಯೇ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಅಧಿಕ ಮಳೆಯಾಗುತ್ತಿದೆ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.